ಬೆಳ್ತಂಗಡಿ: ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬಿನುತಾ ಬಂಗೇರ ಅವರ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಮಾಜಿ ಶಾಸಕ ದಿ| ವಸಂತ ಬಂಗೇರ ಅವರ 79 ಹುಟ್ಟಹಬ್ಬದ ಪ್ರಯುಕ್ತ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಜನವರಿ 15ರಂದು ಮದ್ದಡ್ಕದ ಬಂಡಿಮಠ ಮೈದಾನದಲ್ಲಿ ನಡೆಯಲಿದೆ ಎಂದು ಬ್ರಿಗೇಡ್ ಗೌರವಾಧ್ಯಕ್ಷೆ ಪ್ರಿತೀತಾ ಬಂಗೇರ ತಿಳಿಸಿದರು.ಜನವರಿ 8ರಂದು ಅವರು ಬೆಳ್ತಂಗಡಿ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು. ಪ್ರೌಢಶಾಲಾ ಬಾಲಕ-ಬಾಲಕಿಯರ ವಿಭಾಗದ ಪಂದ್ಯಾಟವು ಅಂದು ಬೆಳಿಗ್ಗೆ 9-30ಕ್ಕೆ ಪ್ರಾರಂಭವಾದರೆ ಪುರುಷರ ಮುಕ್ತ ವಿಭಾಗದ ಪಂದ್ಯಾಟವು ಸಂಜೆ 5-30ಕ್ಕೆ ಪ್ರಾರಂಭಗೊಳ್ಳಲಿರುವುದು. ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಆಲ್ ರೌಂಡರ್, ಹಾಗೂ ಶಿಸ್ತಿನ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪಂದ್ಯಾಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನಗಳಿಸಿದ ತಂಡಗಳಿಗೆ ನಗದು ಹಾಗೂ ಬಂಗೇರ ಬ್ರಿಗೇಡ್ ಟ್ರೋಫಿ ಪ್ರದಾನಿಸಲಾಗುವುದು. ಭಾಗವಹಿಸಿದ ಪ್ರತಿಯೊಂದು ಹೈಸ್ಕೂಲ್ ಮಕ್ಕಳ ತಂಡಗಳಿಗೆ ಶಾಶ್ವತ ಫಲಕ ಮತ್ತು ಸೆಮಿಫನಲ್ ತಲುಪಿದ ತಂಡಗಳ ಸದಸ್ಯರಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಪಂದ್ಯಾಟವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ ಎಂದು ಅವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬ್ರಿಗೇಡ್ ಅಧ್ಯಕ್ಷೆ ಬಿನುತಾ ಬಂಗೇರ ಸದಸ್ಯರಾದ ರಾಜಶ್ರೀ ರಮಣ್, ವೇದಾಂತ, ಅನೂಪ್ ಎಂ. ಬಂಗೇರ, ರಾಕೇಶ್ ಮೂಡುಕೋಡಿ, ಸಲೀಂ ಗುರುವಾಯನಕೆರೆ ಉಪಸ್ಥಿತರಿದ್ದರು.






