ಬೆಳ್ತಂಗಡಿ: ನಮ್ಮ ದೇಶದ ವಿದೇಶಾಂಗ ನೀತಿಯ ನಿಯಮವಾದ ಆಲಿಪ್ತ ನೀತಿಯ ವಿರುದ್ದ ನಡೆಯುವುದು ಕೇಂದ್ರ ಸರಕಾರ ಸಂವಿಧಾನಕ್ಕೆ ಬಗೆಯುವ ಅಪಚಾರ ಆಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಯಾಧವ ಶೆಟ್ಟಿ ಅವರು ಹೇಳಿದರು.ಅವರು ಮಾರ್ಚ್ 23ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಐಟಿಯು , ಎಐಕೆಎಸ್, ಡಿವೈಎಪ್ಐ, ಜೆಎಂಎಸ್, ಡಿಎಚ್ಎಸ್ ಆದಿವಾಸಿ ಮೊದಲಾದ ಸಂಘಟನೆಗಳು ಅಮೇರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುವ ಯುದ್ದ ಖಂಡಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿ ಮಾತಾಡುತ್ತಿದ್ದರು. ಇಡೀ ಜಗತ್ತಿನ ತೈಲ ಉತ್ಪಾದನೆ ಹಾಗೂ ವಿತರಣೆಯ ಸಂಪೂರ್ಣ ಹಿಡಿತ ತನ್ನ ಹಸ್ತ ಬರಲು ಅಮೇರಿಕ ನಡೆಸುವ ಈ ಅಕ್ರಮ ಯುದ್ದಗಳ ತಡೆಯಲು ಭಾರತ ಮುಂದಾಗಬೇಕೆಂದು ಅವರು ಅಗ್ರಹಿಸಿದರು.ಈ ಸಂದರ್ಭ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಬಿ.ಎಂ. ಭಟ್ ಮಾತಾಡುತ್ತಾ; ಒಂದು ದೇಶ ಮತ್ತೊಂದು ದೇಶದ ಸಾರ್ವಭೌಮತೆಯ ಮೇಲೆ ದಾಳಿ ನಡೆಸುವುದು ಅಮೇರಿಕಾದ ಸರ್ವಾಧಿಕಾರಿ ನಡೆಯಾಗಿದೆ ಎಂದರು. ಅಮೇರಿಕಾದ ಸರ್ವಾಧಿಕಾರಿ ನಡೆಯನ್ನು ಬೆಂಬಲಿಸುವುದು ಎಂದರೆ ಅದರ ಗುಲಾಮಗಿರಿಗೆ ಬಲಿಯಾದಂತೆ ಆಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅರಿತುಕೊಂಡು ದೇಶದ ಸ್ವಾಬಿಮಾನ ಹಾಗೂ ಗೌರವ ಉಳಿಸಬೇಕಿದೆ ಎಂದರು. ಬಂಡವಾಳಶಾಹಿಗಳ ಒಳಗಿನ ಬಿಕ್ಕಟ್ಟಿನಿಂದ ಪಾರಾಗಲು ಈ ಸಾಮ್ರಾಜ್ಯಶಾಹಿ ದೇಶಗಳು ಯುದ್ದ ಸಾರಿ ಬಿಕ್ಕಟ್ಟಿಗೆ ತೇಪೆ ಹಾಕಿ ಬದುಕಲು ಪ್ರಯತ್ನಿಸುತ್ತವೆ. ಆದರೆ ಈ ಬಿಕ್ಕಟ್ಟಿಗೆ ಸಮಾಜವಾದವೇ ಪರ್ಯಾಯ ಎಂದು ಅವರು, ಭಾರತ ಶಾಂತಿಯ ದೂತನಾಗಿ ಯುದ್ದ ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಕರೆ ನೀಡಿದರು. ಯುದ್ದ ಜಗತ್ತಿನ ಮಾನವ ಕುಲದ ನಾಶದ ನಡೆ; ಇದನ್ನು ನಾವೆಲ್ಲ ಖಂಡಿಸೋಣ ಎಂದರು. ದುಡಿಯುವ ಜನರ ಬದುಕಿಗೆ ಗಂಡಾಂತರಕಾರಿಯಾದ ಯುದ್ದವನ್ನು ತಡೆಯಲು ಆಗ್ರಹಿಸೋಣ ಎಂದರು.ಮೊದಲಿಗೆ ಶ್ಯಾಮರಾಜ್ ಸ್ವಾಗತಿಸಿ ಕೊನೆಗೆ ಡಿಎಚ್ಎಸ್ ರಾಜ್ಯ ನಾಯಕಿ ಈಶ್ವರಿ ವಂದಿಸಿದರು. ಅಜಿ ಎಂ. ಜೋಸ್ ಮಾತನಾಡಿದರು. ಹಿರಿಯ ಮುಖಂಡರಾದ ಲಕ್ಷ್ಮಣ ಗೌಡ, ಜಯಶ್ರಿ, ಪುಷ್ಪ, ಮಹಿಳಾ ಮುಖಂಡರಾದ ಕಿರಣಪ್ರಭಾ, ಕುಮಾರಿ, ಡಿವೈಎಪ್ಐ ಮುಖಂಡರಾದ ಅಭಿಷೇಕ್, ಆದಿವಾಸಿ ಸಂಘಟನೆಯ ಪ್ರವೀಣ್ ಎಂ.ಕೆ. ಕಟ್ಟಡ ಸಂಘದ ಲೋಕೇಶ್, ಅಶ್ವಿತ, ಅಪ್ಸ, ಮೊದಲಾದವರು ಇದ್ದರು. ಕೊನೆಗೆ ತಹಶಿಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಆಗ್ರಹ ಪತ್ರ ನೀಡಲಾಯ್ತು.







