ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 11ರ ಮಹಾನವಮಿವರೆಗೆ ಪ್ರತಿ ರಾತ್ರಿ ವಿಶೇಷ ಪೂಜೆ, ಬಲಿ ಉತ್ಸವ, ವಸಂತಮಂಟಪದಲ್ಲಿ ಪೂಜೆ, ಕನ್ನಿಕಾಪೂಜೆ, ಅಷ್ಟಾವಧಾನ ಸೇವೆ, ಅಕ್ಟೋಬರ್ 9ರ ಮೂಲಾನಕ್ಷತ್ರದಂದು ಚಂಡಿಕಾಯಾಗ ಹಾಗೂ ಅಕ್ಟೋಬರ್ 11ರವರೆಗೆ ಪಲ್ಲಕಿ ಉತ್ಸವ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ದೇವಸ್ಥಾನದ ಪ್ರವಚನ ಮಂಟಪದಲ್ಲಿ ಪ್ರತಿ ದಿನ ಸಂಜೆ ಗಂಟೆ 6ರಿಂದ 8ರವರೆಗೆ ನಾಡಿನ ಖ್ಯಾತ ಕಲಾವಿದರಿಂದ ಸಂಗೀತ, ಭಕ್ತಿ ಸಂಗೀತ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಿತು. ಪ್ರತಿ ರಾತ್ರಿ ಅಮೃತವರ್ಷಿಣಿ ಸಭಾಭವನದಲ್ಲಿ ವಿವಿಧ ತಂಡಗಳಿಂದ ಆಕರ್ಷಕ ಹುಲಿ ಕುಣಿತ ನಡೆಯಿತು. ಅಕ್ಟೋಬರ್ 11ರ ಮಹಾನವಮಿ ದಿನ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ದೇವರ ಪ್ರಸಾದ ರೂಪವಾಗಿ ಸುಮಂಗಲಿಯರಿಗೆ ವಸ್ತ್ರ ಪ್ರಸಾದ ವಿತರಿಸಿದರು. ಜಿಲ್ಲೆಯಾದ್ಯಂತದಿಂದ ಸಹಸ್ರಾರು ಮುತ್ತೈದೆಯರು ಮಧ್ಯರಾತ್ರಿಯವರೆಗೂ ಸರತಿಯ ಸಾಲಿನಲ್ಲಿ ಬಂದು ಶ್ರದ್ಧಾಭಕ್ತಿಯಿಂದ ವಸ್ತ್ರ ಪ್ರಸಾದ ಸ್ವೀಕರಿಸಿದರು.






