ಬೆಳ್ತಂಗಡಿ: ಕಾಲ ಬದಲಾಗಿದೆ, ಭಾರತ ಬದಲಾಗುತ್ತಿದೆ; ಸಂಸಾರವೆಂಬ ರಥದಲ್ಲಿ ಪುರುಷ ಹಾಗೂ ಮಹಿಳೆ ಎರಡು ಚಕ್ರಗಳಿದ್ದಂತೆ. ಇಬ್ಬರೂ ಸರಿಸಮಾನವಾಗಿ ಹೆಜ್ಜೆ ಹಾಕಿದರೆ ಸಂಸಾರದ ಹಾದಿ ಸುಗಮವಾಗಿ ಸಾಗುವುದು. ಅಂತೆಯೇ ಸರಿಸಮಾನತೆಯಿಂದ ದೇಶ ಹಾಗೂ ಸಮಾಜದ ಅಭಿವೃದ್ಧಿಯ ದೃಷ್ಟಿಯಲ್ಲಿ ಜೊತೆಯಾಗಿ ಸಾಗಬೇಕು ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ್ಸಿಂಹ ನಾಯಕ್ ಹೇಣಲಿದರು. ಅವರು ನವೆಂಬರ್ 23ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಬೆಳ್ತಂಗಡಿ ಲಾಯ್ಲದ ವಿಮುಕ್ತಿ ಸ್ವಸಹಾಯ ಸಂಘಗಳ ಟ್ರಸ್ಟ್ ಬೆಳ್ಳಿಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಧರ್ಮ, ಅರ್ಥ, ಕಾಮ, ಮೋಕ್ಷ; ಈ ಚತುರ್ವಿಧ ಪುರುಷಾರ್ಥಗಳಲ್ಲಿ ಧರ್ಮ, ಕಾಮನೆಗಳ ಬಯಕೆ ನೀಗಿಸಲು ಅರ್ಥ ಅವಶ್ಯಕ. ಸಮಾಜದಲ್ಲಿ ಮರ್ಯಾದೆಯಾಗಿ ಬದುಕಲು ಅರ್ಥ ಸಂಪಾದನೆ ಬೇಕು. ಅದು ಧರ್ಮದ ಹಾದಿಯಲ್ಲಿ ಸಾಗಿದರೆ ಸಾರ್ಥಕ ಜೀವನ ಪ್ರಾಪ್ತಿಯಾಗುವುದು. ಗೃಹ ನಿರ್ವಹಣೆಯಲ್ಲಿ ಮಹಿಳೆಯರಿಗಿರುವಷ್ಟು ಶಕ್ತಿ ಪುರುಷರಿಗಿಲ್ಲ. ಮಹಿಳೆಯರಿಂದ ಸಮಾಜದ ಬದಲಾವಣೆಗೆ ಶಕ್ತಿ ಬಂದಿದೆ. ಸರಕಾರದ ಮಹಿಳಾ ಕೇಂದ್ರಿತ ಯೋಜನೆಗಳು ಹೆಚ್ಚು ಕಾರ್ಯಗತಗೊಳ್ಳಲು ಮಹಿಳೆಯರು ಶಕ್ತಿಯಾಗಿದ್ದಾರೆ. ಸ್ವಚ್ಛ ಭಾರತ ಯೋಜನೆಯ ಸ್ವಚ್ಛತೆ, ಶೌಚಾಲಯ, ಉಜಾಲ ಉಜ್ವಲ ಯೋಜನೆ, ಭೇಟಿ ಬಚಾವೋ-ಭೇಟಿ ಪಡಾವೋ ಮೊದಲಾದ ಯೋಜನೆಗಳು ಫಲಪ್ರದವಾಗಿವೆ. ಮಹಿಳೆಯರು ತಮ್ಮ ಹಕ್ಕು ಮಾತ್ರವಲ್ಲ, ಕರ್ತವ್ಯಗಳ ಬಗೆಗೂ ಜಾಗೃತರಾಗಿದ್ದಾರೆ. ಮಹಿಳೆಯರ ಸಾಧನೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು. ವಿಧಾನ ಪರಿಷತ್ ಮಾಜಿ ಶಾಸಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ; ವಿಮುಕ್ತಿ ಸ್ವಸಹಾಯ ಸಂಘಗಳಿಂದ ತಾಲೂಕಿನ ಮಹಿಳೆಯರು ಆರ್ಥಿಕವಾಗಿ ಸಶಕ್ತರಾಗಿ ಹೆಚ್ಚು ಸ್ವಾವಲಂಬಿಗಳಾಗಿದ್ದಾರೆ. ಸ್ವಂತ ದುಡಿಮೆಯಿಂದ ಕುಟುಂಬದ ನಿರ್ವಹಣೆಯನ್ನು ಸುಲಲಿತವಾಗಿ ನಡೆಸುತ್ತಿದ್ದಾರೆ ಎಂದು ಶುಭಾಶಂಸನೆಗೈದರು. ಕಪುಚಿನ್ ಕೃಷಿಕ ಸೇವಾ ಕೇಂದ್ರದ ಅಧ್ಯಕ್ಷ ವಂದನೀಯ ಆಲ್ವಿನ್ ಡಾಯಸ್ ವಿಮುಕ್ತಿ ಸ್ವಸಹಾಯ ಸಂಘಗಳ 25 ವರ್ಷಗಳ ನಡೆದು ಬಂಡ ಹಾದಿಯನ್ನು ಅವಲೋಕಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಮುಕ್ತಿ ಸ್ವಸಹಾಯ ಸಂಘಗಳ ಟ್ರಸ್ಟ್ ಅಧ್ಯಕ್ಷೆ ಶಾಲಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಮೂಡಬಿದ್ರಿಯ ನ್ಯಾಯವಾದಿ ಅಶ್ವಿನಿ ಡಿ’ಸೋಜಾ ಮಾತನಾಡಿ; ಹೆಣ್ಣು ಸಹನಾಮೂರ್ತಿ ಮಾತ್ರವಲ್ಲ; ಸೌಂದರ್ಯದ ಗಣಿ. ಕುಟುಂಬದಲ್ಲಿ ಹಾದಿ ತಪ್ಪಿ ಹೋಗುವವರನ್ನು ಸರಿದಾರಿಯಲ್ಲಿ ಸಾಗಿಸುವವಳು ಹೆಣ್ಣು. ನಾವು ಶಿಕ್ಷಿತರಾದರೂ ಸಮಾಜದಿಂದ ದೂರ ಹೋಗುತ್ತಿರುವ ಸಂದರ್ಭದಲ್ಲಿ ಮಹಿಳೆಯರು ತಮ್ಮ ಹಕ್ಕು, ಕರ್ತವ್ಯಗಳನ್ನು ಅರಿತು ತಮ್ಮ ಮನೋಸ್ಥಿತಿ ಬದಲಿಸಿ, ಸ್ತ್ರೀಪುರುಷರು ಜೊತೆಯಾಗಿ ಸಾಗಬೇಕು. ಶಿಕ್ಷಣ, ಜ್ಞಾನ ಪಡೆಯಲು ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಸಮಾಜದ ಅನಿಷ್ಟ ಪದ್ಧತಿಗಳನ್ನು ತೊಲಗಿಸಿ, ನಾರೀ ಶಕ್ತಿಯಿಂದ ಒಳ್ಳೆಯ ಅಭಿವೃದ್ಧಿ ಕಾರ್ಯಗಳಿಂದ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದರು. ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿಯ ನಿರ್ದೇಶಕ ವಂದನೀಯ ವಿನೋದ್ ಮಸ್ಕರೇನ್ಹಸ್ ಪ್ರಸ್ತಾವಿಸಿದರು. ಬೆಸ್ಟ್ ಫೌಂಡೇಶನ್ ಮುಖ್ಯಸ್ಥ ರಕ್ಷಿತ್ ಶಿವರಾಂ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯದರ್ಶಿ ರೈನಾ ಲೋಬೊ ಸಂಘದ 25ವರ್ಷಗಳ ಸಾಧನೆಯ ವರದಿ ಮಂಡಿಸಿದರು. ಸ್ವಸಹಾಯ ಸಂಘದ ಸದಸ್ಯರು ಸಂಗ್ರಹಿಸಿದ ರೂಪಾಯಿ 8.50 ಲಕ್ಷ ಮೊತ್ತದ ನೂತನ ಆರೋಗ್ಯ ನಿಧಿಯನ್ನು ಅಧ್ಯಕ್ಷೆ ಶಾಲಿ ಉದ್ಘಾಟಿಸಿ, ಅದನ್ನು ಸ್ವಸಹಾಯ ಸಂಘದ ಅನಾರೋಗ್ಯ ಪೀಡಿತ ಸದಸ್ಯರು ಹಾಗೂ ಆರ್ಥಿಕವಾಗಿ ಅಗತ್ಯವುಳ್ಳರಿಗೆ ನೆರವಾಗುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿಮುಕ್ತಿ ಸ್ವಸಹಾಯ ಒಕ್ಕೂಟದ ಹಿಂದಿನ 10ಮಂದಿ ಅಧ್ಯಕ್ಷರು ಹಾಗು 10ಮಂದಿ ಉಪಾಧ್ಯಕ್ಷರನ್ನು ಗಣ್ಯ ಅತಿಥಿಗಳ ಸಮಕ್ಷಮ ಗೌರವಿಸಲಾಯಿತು. ವೇದಿಕೆಯಲ್ಲಿ ಅರುಣಾ ಲೋಬೊ, ಸಿಡಿಪಿಓ ಪ್ರಿಯ ಆಗ್ನೆಸ್, ಇಂದಿರಾ, ಚೈತ್ರ, ಸಂಘದ ಉಪಾಧ್ಯಕ್ಷೆ ಶಶಿಕಲಾ, ಜತೆ ಕಾರ್ಯದರ್ಶಿ ಪ್ರಮೀಳಾ ಉಪಸ್ಥಿತರಿದ್ದರು. ಮೆರೀನ್ ಸ್ವಾಗತಿಸಿದರು.