ಬದುಕು ಕಟ್ಟೋಣ ಬನ್ನಿ ತಂಡದ ಸಾಹಸ: 12 ಮನೆಗಳ ಹಸ್ತಾಂತರಕ್ಕೆ ಮುಹೂರ್ತ ಫಿಕ್ಸ್

ಬದುಕು ಕಟ್ಟೋಣ ಬನ್ನಿ ತಂಡದ ಸಾಹಸ: 12 ಮನೆಗಳ ಹಸ್ತಾಂತರಕ್ಕೆ ಮುಹೂರ್ತ ಫಿಕ್ಸ್
Facebook
Twitter
LinkedIn
WhatsApp

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.‌ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು‌ ಹೇಮಾವತಿ‌ ವೀ. ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಮತ್ತು ಶಾಸಕ ಹರೀಶ್ ಪೂಂಜ ಅವರ ಮಾರ್ಗದರ್ಶನದಲ್ಲಿ ಚಾರ್ಮಾಡಿ ಗ್ರಾಮದ ಕೊಳಂಬೆ ನೆರೆಪೀಡಿತ ಪ್ರದೇಶದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಮೂಲಕ‌‌ ನಿರ್ಮಿಸಿದ 12 ಮನೆಗಳ ಗೃಹಪ್ರವೇಶೋತ್ಸವ ಅರ್ಥಬದ್ಧವಾಗಿ ಮೇ 8ರಂದು ಹಮ್ಮಿಕೊಳ್ಳಲಾಗಿದೆ ಎಂದು ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.ಉಜಿರೆಯ ದಿಶಾ ಹೊಟೇಲ್ ನಲ್ಲಿ ಎಪ್ರಿಲ್ 30ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ಸಂಪೂರ್ಣ ವಿವರ ನೀಡಿದರು. 2019ರಲ್ಲಿ ನೆರೆ ಬಂದ ಸಂದರ್ಭದಲ್ಲಿ ಮರು ಉಪಯೋಗಕ್ಕೂ ಕಷ್ಟ ಸಾಧ್ಯವೆಂಬಂತಿದ್ದ ಕೊಳಂಬೆ ಪ್ರದೇಶದಲ್ಲಿ ಇಂದು ಅದ್ಭುತವಾದ ಪರಿವರ್ತನೆಯಾಗಿದೆ. ಈ‌ ಮನೆಗಳ ಉದ್ಘಾಟನೆಯನ್ನು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೆರವೇರಿಸಲಿದ್ದಾರೆ‌. ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್‌ಸಿಂಹ ನಾಯಕ್, ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ, ಬರೋಡದ ಖ್ಯಾತ ಉದ್ಯಮಿ ಶಶಿಧರ ಶೆಟ್ಟಿ, ತುಳು ರಂಗ ಭೂಮಿಯ ಕಲಾವಿದ ಅರವಿಂದ ಬೋಳಾರ್,‌ ಚಾರ್ಮಾಡಿ ಗ್ರಾ‌ಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ವಿ. ಪ್ರಸಾದ್, ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಂಜಿನಿ, ನೆರಿಯ ಗ್ರಾಮ .ಪಂಚಾಯತ್ ಅಧ್ಯಕ್ಷೆ ವಸಂತಿ ಇವರುಗಳು ಭಾಗಿಯಾಗಲಿದ್ದಾರೆ. ಅಪಸ್ವರ ಬಂದರೂ ಎದೆಗುಂದದೆ ಮಾಡಿದ ನಮ್ಮ ಕೆಲಸದಿಂದ ನಮಗೇ ತೃಪ್ತಿಯಾಗಿದೆ;2019ರ ವರಮಹಾಲಕ್ಷ್ಮೀ ಪೂಜೆಯ ದಿವಸದಂದು ನೆರೆ ಬಂದಿದ್ದಾಗ ನಾನು ಮತ್ತು ಉದ್ಯಮಿಯಾಗಿರುವ ನನ್ನ ಮಿತ್ರ ರಾಜೇಶ್ ಪೈ ಅವರು ಎಲ್ಲರಂತೆ ಘಟನಾ ಸ್ಥಳ ವೀಕ್ಷಣೆಗೆ ಹೋಗಿದ್ದೆವು. ಹೊರಡುವಾಗ ನಮ್ಮ ಮನದಲ್ಲಿ ಅಲ್ಲಿನ‌ ಸಂಕಷ್ಟ ಪೀಡಿತರಿಗೆ ತಲಾ 50 ಕೆ.ಜಿ ಅಕ್ಕಿ ಕೊಡಬೇಕೆಂದು ಅಂದುಕೊಂಡು ಹೋಗಿದ್ದೆವು. ಆದರೆ ನಾವು ಅಲ್ಲಿ ಹೋಗಿ ನೋಡುವಾಗ ಅಲ್ಲಿನ ಪರಿಸ್ಥಿತಿ ಅಯೋಮಯವಾಗಿತ್ತು. ಕೆಸರು ತುಂಬಿದ ಅಲ್ಲಿನ ಭೂಮಿಯಲ್ಲಿ ಒಂದು ಹೆಜ್ಜೆ ತೆಗೆದು ಇನ್ನೊಂದು ಹೆಜ್ಜೆ ಇಡಲು ಜಾಗ ಇರಲಿಲ್ಲಿ. ಕೆಲವರ ವಾಸದ ಮನೆ ಕುಸಿದುಹೋಗಿದ್ದರೆ ಇನ್ನೂ ಕೆಲವು ಭಾಗಶಃ ಹಾನಿಯಾಗಿದ್ದವು. ಉಳಿದ ಕೆಲವು ಮನೆಗಳು, ‌ಕುಡಿಯುವ ನೀರಿನ ಬಾವಿ ಸಂಪೂರ್ಣ ಕೆಸರುಮಯವಾಗಿ ಬದುಕೇ ಅಸಾಧ್ಯ ಎಂಬಂತಿತ್ತು. ಅಲ್ಲಿನ ಜನ ನಾವು ಇಲ್ಲಿ ಇನ್ನು ವಾಸಿಸುದಿಲ್ಲ. ನಮಗೆ ಐದು ಸೆಂಟ್ಸ್ ಭೂಮಿ ಎಲ್ಲಾದರೂ ತೆಗೆಸಿಕೊಡಿ ಎಂದು ಗೋಗರೆದಿದ್ದರೆ; ಅದನ್ನೆಲ್ಲ ನೋಡಿ ಅಂದೇ ಆ ಪ್ರದೇಶಕ್ಕೆ ಏನಾದರೊಂದು ಸೇವೆ ಮಾಡಬೇಕೆಂದು ಸಂಕಲ್ಪಿಸಿ ಹೆಜ್ಜೆ ಇಟ್ಟವರು ಎರಡೂವರೆ ವರ್ಷದಲ್ಲಿ ಇಂದು ಈ ಮಟ್ಟಕ್ಕೆ ಅವರ ಬದುಕನ್ನು ಕಟ್ಟಿಕೊಡಲು ಶ್ರಮಿಸಿದ್ದೇವೆ.‌ ಆರಂಭದಲ್ಲಿ ನಮಗೆ ಅನೇಕ ಟೀಕೆಗಳು ಎದುರಾಗಿದ್ದವು. ಉದ್ಯಮಿಗಳಾದ ಅವರು ಮರಳು ವ್ಯಾಪಾರದ‌ ದುರುದ್ದೇಶದಿಂದ ಬಂದಿರಬಹುದು ಎಂದು ಕೆಲವರು ಮಾತನಾಡಿಕೊಂಡರೂ ನಾವು ಎದೆಗುಂದದೆ ನಮ್ಮ ಗುರಿಯೆಡೆಗೆ ಲಕ್ಷ್ಯವಿಟ್ಟು ಕೆಲಸ ಮಾಡಿದ್ದರಿಂದ ಇಂದು ನಮ್ಮಿಂದ ಈ ಮಹತ್ ಸಾಧನೆ ಸಾಧ್ಯವಾಯಿತು ಎಂದು ಮೋಹನ್ ಕುಮಾರ್ ತಿಳಿಸಿದರು. 5500 ಮಂದಿಯ ಶ್ರಮಾದಾನ: ಕೊಳಂಬೆಯಲ್ಲಿ ಸ್ವಯಂ ಆಸಕ್ತಿಯಿಂದ ಬಂದ ಅನೇಕ ಸಂಘ ಸಂಸ್ಥೆಗಳು ಹಾಗೂ ಸ್ವ ಆಸಕ್ತರ ತಂಡದಿಂದ ನಿರಂತರ ಶ್ರಮದಾನದ ಮೂಲಕ ಇಂದು ಪ್ರಗತಿ ಸಾಧ್ಯವಾಗಿದೆ. ಸುಮಾರು 5500 ಮಂದಿಯ ಶ್ರಮಾದಾನ ನಡೆದಿದೆ. ಮನೆ ಮಾತ್ರವಲ್ಲದೆ ಆ ಭಾಗದ ಜನರು ನೆರೆಯಿಂದಾಗಿ ಕಳೆದುಕೊಂಡ ಕೃಷಿಯನ್ನೂ ಮರುಸ್ಥಾಪಿಸಿದ್ದೇವೆ. ಬದುಕಿನ ದಾರಿಯಾಗಿ ಗೋವುಗನ್ನು ದಾನ ನೀಡಿದ್ದೇವೆ ಎಂದು ನೆನಪಿಸಿಕೊಂಡರು. ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅವರು ಡಿಎಂಸಿ ಮೂಲಕ ಅಭಿಯಂತರರನ್ನು ಕಳಿಸಿಕೊಟ್ಟು ಎಲ್ಲ ಸಹಕಾರ ನೀಡಿದ್ದಾರೆ‌. ಸರಕಾರದ 5 ಲಕ್ಷ ರೂಪಾಯಿ ಅನುದಾನ, ಶಾಸಕರ ಶ್ರಮಿಕ ಕಾಳಜಿ ಪಂಡ್‌ನಿಂದ 1 ಲಕ್ಷ ರೂಪಾಯಿ, ಫಲಾನುಭವಿಗಳ ಸಹಭಾಗಿತ್ವದ 2.50 ಲಕ್ಷ ರೂಪಾಯಿಗಳು; ಉಳಿದಂತೆ ವಸ್ತುರೂಪದಲ್ಲಿ ಬಂದ ಸಹಕಾರವನ್ನು ಸಂಯೋಜಿಸಿ 13.50 ಲಕ್ಷ ರೂಪಾಯಿ ಮೊತ್ತದಲ್ಲಿ 12 ಮನೆಗಳು ನಿರ್ಮಾಣವಾಗಿದೆ ಎಂದರು. ಮೇ 8ರಂದು ಅದ್ಭುತ ಕಾರ್ಯಕ್ರಮ ಸಂಘಟಿಸಿದ್ದೇವೆ. ಮನೆ ಹಸ್ತಾಂತರದ ಬಳಿಕವೂ ಮುಂದಿನ ಒಂದು ವರ್ಷ ನಾವು ಅವರ ಜೊತೆ ಇರುತ್ತೇವೆ. ಅಲ್ಲಿ ಕಿರುಸೇತುವೆ ಹಾಗೂ ಕಾಂಕ್ರೀಟ್ ರಸ್ತೆ ಆವಶ್ಯಕತೆ ಇದ್ದು ಶಾಸಕರ ಬಳಿ ಕೇಳಿಕೊಳ್ಳಲಿದ್ದೇವೆ ಎಂದು ವಿವರ ನೀಡಿದರು.ಮಾಧ್ಯಮದ ಸಹಕಾರದಿಂದ ಜನ ಶ್ರಮದಾನಕ್ಕೆ ಬರುವಂತಾಯಿತು. ಬರೋಡದ ಉದ್ಯಮಿ ಶಶಿಧರ ಶೆಟ್ಟಿ ಮತ್ತು ರಾಜೇಶ್ ಶೆಟ್ಟಿ ಅವರೂ ನೆರವು ನೀಡಿದ್ದಾರೆ. ರೋಟರಿ ಸಂಸ್ಥೆಯಿಂದ ಎಲ್ಲಾ ಮನೆಗಳ ವಿದ್ಯುತ್ ಸಂಪರ್ಕಕ್ಕೆ ಸಾಮಾಗ್ರಿಗಳನ್ನು ಒದಗಿಸಿದ್ದಾರೆ. ಹೀಗೆ ಎಲ್ಲರ ಸಹಕಾರ ಪಡೆದು ನಿರಂತರ ಹೋರಾಟದಿಂದ ಮರುನಿರ್ಮಾಣ ಸಾಧ್ಯವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಮತ್ತೋರ್ವ ಸಂಚಾಲಕ ರಾಜೇಶ್ ಪೈ, ಸುರಕ್ಷಾ ಮೆಡಿಕಲ್‌ನ ಶ್ರೀಧರ ಕೆ. ವಿ., ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಎಂ. ಉಪಸ್ಥಿತರಿದ್ದರು.

Latest News

Related Posts