ಬೆಳ್ತಂಗಡಿ: ಮಹಾಗಣಪತಿಯ ದಿವ್ಯಸಾನಿಧ್ಯವುಳ್ಳ ಅಳದಂಗಡಿ ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯು ಸಹಸ್ರಾರು ಆಸ್ತಿಕರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.ವೇದಮೂರ್ತಿ ವಿಜಯಕೃಷ್ಣ ಐತಾಳರ ನೇತೃತ್ವದಲ್ಲಿ 24 ತೆಂಗಿನಕಾಯಿ ಗಣಹವನ, ಪ್ರಧಾನ ಅರ್ಚಕ ಸೋಮನಾಥ ಮಯ್ಯ ಹಾಗೂ ಸಹ ಅರ್ಚಕ ಪ್ರವೀಣ ಮಯ್ಯ ಅವರ ಪೌರೋಹಿತ್ಯದಲ್ಲಿ ವಿವಿಧ ಸೇವೆಗಳು, ಮಹಾಮಂಗಳಾರತಿ ಇತ್ಯಾದಿಗಳು ನಡೆದವು.

ಸ್ಥಳೀಯರಿಂದ ಭಜನಾ ಸತ್ಸಂಗ, ಗಣೇಶ ದೇವಾಡಿಗ ಅವರಿಂದ ವಾದ್ಯಸೇವೆ ನೆರವೇರಿತು.ಬೆಳ್ಳಂದೂರಿನ ರಾಣಿ ಶ್ರೀನಿವಾಸ ರೆಡ್ಡಿ ಅವರು ನಾಲ್ಕೂವರೆ ಅಡಿಯ ತೋಮಾಲೆ, ನಾಲ್ಕು ಅಡಿಯ ಸುಗಂಧ ರಾಜ, ನಾಲ್ಕು ಅಡಿಯ ರುದ್ರಾಕ್ಷಿ ಹಾರ, ನಾಲ್ಕು ಅಡಿಯ ಗಣಗಲೆ ಹಾರ ಮತ್ತು 4 ಅಡಿಯ ಸೇವಂತಿಗೆ ಹಾರಗಳನ್ನು ಗಣಪತಿಯ ಅಲಂಕಾರಕ್ಕೆ ಅರ್ಪಿಸಿದರು. ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು ಸದಸ್ಯರಾದ ಡಾl ಶಶಿಧರ ಡೋಂಗ್ರೆ ಶೆಣೇರೆ ಬೈಲು, ನಿತ್ಯಾನಂದ ಶೆಟ್ಟಿ ನೊಚ್ಚ, ಅನಿಲ್ ಕೊಟ್ಟಾರಿ ಮಾಳಿಗೆ ಮನೆ, ವೈಶಾಲಿ ಶೆಟ್ಟಿ, ಜಯಂತಿ ಶೆಟ್ಟಿ, ಸದಾನಂದ ಮಾಳಿಗೆ, ಪಿ.ಕೆ. ಚಂದ್ರಶೇಖರ ನಿರ್ವಹಿಸಿದರು.







