ಲಾಯಿಲ : ಕೋರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವೇಕಾನಂದ ನಗರದಲ್ಲಿರುವ ತೀರಾ ಬಡತನ ದಲ್ಲಿರುವ ಕುಟುಂಬಗಳಿಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್ ರವರು ನೀಡಿರುವ ಆಹಾರದ ಕಿಟ್ ಗಳನ್ನು ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕುಮಾರ್ ರವರು ಹಾಗೂ ತಾಲೂಕು ಯೂತ್ ಕಾಂಗ್ರೆಸಿನ ಅಧ್ಯಕ್ಷರಾದ ಅಭಿನಂದನ್ ಹರೀಶ್ ಕುಮಾರ್ ವಿತರಿಸಿದರು.
ಜನಪ್ರತಿನಿಧಿಗಳು ತಮ್ಮವರು ಮಾಸ್ಕ್ ಧರಿಸುವಂತೆ ಮುನ್ನಚ್ಚರಿಕೆ ವಹಿಸುವುದರೊಂದಿಗೆ, ಕಿಟ್ ವಿತರಣೆಯ ಸಂದರ್ಭ ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರದ ಬಗ್ಗೆಯೂ ಜಾಗೃತಿ ಮೂಡಿಸಿದರೆ, ಕೊರೋನಾ ಸೋಂಕು ತಡೆಗೆ ಆಹಾರ ಕಿಟ್ ವಿತರಿಸಿದ್ದಕ್ಕಿಂತ ಹೆಚ್ಚಿನ ಉಪಕಾರ ಸಮಾಜಕ್ಕೆ ಆಗುತ್ತಿತ್ತು. ಈ ಕಾರ್ಯಕ್ರಮದ ಫೊಟೋ ನೋಡಿದರೆ ಮಾಸ್ಕ್ ಧರಿಸಬೇಕೆಂಬ ಎಚ್ಚರಿಕೆ ಬಹುತೇಕರಿಗೆ ಇದ್ದಂತಿಲ್ಲ. ನಾವು ಮಾಸ್ಕ್ ಧರಿಸುವುದರ ಜೊತೆಗೆ ನಮ್ಮ ಸುತ್ತಮುತ್ತ ಇರುವವರೂ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿದರೆ ಮಾತ್ರ ಕೊರೋನಾ ಸೋಂಕು ಹರಡುವಿಕೆಯ ವಿರುದ್ಧ ಮುಂಜಾಗ್ರತೆ ವಹಿಸಿದಂತಾಗುತ್ತದೆ.
ವಿವೇಕಾನಂದ ನಗರದ ಸರಸ್ವತಿ ಭಜನಾಮಂದಿರದ ವಠಾರದಲ್ಲಿ ನಡೆದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾದ ಬಿ.ಕೆ ವಸಂತ್, ಬೆಳ್ತಂಗಡಿ ಲಾಯಿಲ ಗ್ರಾಮ ಪಂಚಾಯತಿನ ಸದಸ್ಯರಾದ ರೇವತಿ, ಯೂತ್ ಕಾಂಗ್ರೆಸಿನ ಸದಸ್ಯರಾದ ಗಣೇಶ್ ಕಣಿಯೂರು, ಸರಸ್ವತಿ ಭಜನಾ ಮಂದಿರದ ಮುಖ್ಯಸ್ಥರುಗಳಾದ ನಂದಕುಮಾರ್, ಹರೀಶ್ ಕುಲಾಲ್ ಹಾಗೂ ಆಶಾ ಕಾರ್ಯಕರ್ತೆಯಾದ ಅನುರಾಧಾ ಮತ್ತಿತರರು ಉಪಸ್ಥಿತರಿದ್ದರು. ಈ ಪ್ರದೇಶದಲ್ಲಿ ಸುಮಾರು 135 ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಯಿತು.







