ಮಾಸ್ಕ್ ನಿಂದ ಮುಖ ಮುಚ್ಚದ ರೋಟರಿ ಸದಸ್ಯರು.
ಬೆಳ್ತಂಗಡಿ ರೋಟರಿ ಕ್ಲಬ್ಬಿನವರು ಲಾಕ್ ಡೌನಿನ ಬಳಿಕ ತಮ್ಮ ಎಲ್ಲ ಸೇವಾಕಾರ್ಯಗಳಲ್ಲಿ ಕೊರೋನಾ ಸೋಂಕು ತಡೆಯಲು ವಹಿಸಬೇಕಾದ ಮುಂಜಾಗ್ರತೆಯ ಬಗ್ಗೆ ಸಂದೇಶ ನೀಡುತ್ತಿದ್ದು, ತಾಲೂಕಿನ ಇತರ ಸೇವಾಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ. ಆದರೆ ಮೇ 9ರಂದು ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ರೋಟರಿ ಸಮುದಾಯ ದಳದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಪ್ರಕಾಶ್ ನಾರಾಯಣ್ ಹಾಗೂ ಸದಸ್ಯ ಕಜೆ ವೆಂಕಟೇಶ್ವರ ಭಟ್ ಮಾಸ್ಕನ್ನು ಕತ್ತಿಗೆ ಮಾಲಾಕಾರವಾಗಿ ಹಾಕಿಕೊಳ್ಳುವ ಮೂಲಕ ಫೊಟೋಗೆ ಪೋಸ್ ಕೊಡಲು ಆಸಕ್ತಿ ತೋರಿದಂತಿದೆ.
ಚಾರ್ಮಾಡಿ ಗ್ರಾಮದ ಕಕ್ಕಿಂಜೆಯ ಅಶಕ್ತ ಕುಟುಂಬದ ಮಗುವೊಂದು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ವೈದ್ಯರು ಮಗುವಿಗೆ ಶಸ್ತ್ರ ಚಿಕಿತ್ಸೆ ಅಗತ್ಯ ಎಂದಿದ್ದಾರೆ. ಹೃದಯ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಕುಟುಂಬಕ್ಕೆ ಆಸರೆಯಾಗಿ ಬಂದದ್ದು ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಅ್ಯನ್ಸ್ ಕ್ಲಬ್ಬಿನ ಸಹಭಾಗಿತ್ವದಲ್ಲಿ ಮುಂಡಾಜೆಯ ರೋಟರಿ ಸಮುದಾಯ ದಳ. ಇದೀಗ ಮಗುವಿನ ಮನೆಯವರಿಗೆ ಆರ್ಥಿಕ ನೆರವು ನೀಡಿರುವ ಮುಂಡಾಜೆಯ ರೋಟರಿ ಸಮುದಾಯ ದಳ, ಮುಂದಿನ ದಿನಗಳಲ್ಲಿ ಮಗುವಿನ ಹೃದಯ ಶಸ್ತ್ರ ಚಿಕಿತ್ಸೆಯ ವೆಚ್ಚ ಭರಿಸುವ ಭರವಸೆ ನೀಡಿದೆ. ಮುಂಡಾಜೆ ರೋಟರಿ ಸಮುದಾಯ ದಳದ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯ ಕೊರಗಪ್ಪ ಗೌಡ ಹಾಜರಿದ್ದರು.







