ಗ್ರಾಮ ಪಂಚಾಯತಿನ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲರಾಗಿ ಪ್ರತಿಪಕ್ಷ ಕಾಂಗ್ರೇಸ್ ಮಾತ್ರವಲ್ಲ; ಸ್ವಪಕ್ಷೀಯರಾದ ಬಿಜೆಪಿ ಸದಸ್ಯರ ಅಸಮಾಧಾನಕ್ಕೆ ಗುರಿಯಾಗಿದ್ದ ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ವಿ. ಶೆಟ್ಟರ ಮೇಲೆ ಎಲ್ಲ ಸದಸ್ಯರೂ ಭ್ರಷ್ಟಾಚಾರದ ಆರೋಪವನ್ನೂ ಈ ಹಿಂದೆ ಹೊರಿಸಿ ತನಿಖೆಗೆ ಆಗ್ರಹಿಸಿದ್ದರು. ಇದೀಗ ಮೇ 11ರಂದು ಗ್ರಾಮ ಪಂಚಾಯತಿನ ಎಲ್ಲ 23ಮಂದಿ ಸದಸ್ಯರು ಒಗ್ಗಟ್ಟಾಗಿ ಪಕ್ಷಭೇದ ಮರೆತು ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿಯವರ ವಿರುದ್ಧ ಅವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಪುತ್ತೂರಿನ ಸಹಾಯಕ ಕಮಿಷನರರಿಗೆ ಲಿಖಿತವಾಗಿ ಸಲ್ಲಿಸಿದ ಅವಿಶ್ವಾಸ ಮಂಡನಾ ಪತ್ರದಲ್ಲಿ ತಮಗೆ ಯಾರಿಗೂ ನಮ್ಮ ಗ್ರಾಮ ಪಂಚಾಯತಿನ ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿಯವರ ಮೇಲೆ ವಿಶ್ವಾಸ ಇಲ್ಲದ್ದರಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಕ್ರಾಸ್ತಾ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕ ಅನೂಪ್ ಜೆ. ಪಾಯ್ಸ್ ನೇತೃತ್ವದಲ್ಲಿ ಪುತ್ತೂರಿನ ಸಹಾಯಕ ಕಮಿಷನರನ್ನು ಭೇಟಿಯಾದ ತಂಡದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಲೋಕಯ್ಯ ಪೂಜಾರಿ, ಸತೀಶ್ ಹೆಗ್ಡೆ, ವಿಕ್ಟರ್ ಮಿನೇಜಸ್, ರಾಜೇಶ್ ಪೂಜಾರಿ ಮೂಡುಕೋಡಿ, ಯಶೋಧರ ಹೆಗ್ಡೆ, ಅಣ್ಣು, ಲಕ್ಷ್ಮಣ ಪೂಜಾರಿ, ಹರೀಶ್ ಪಿ. ಎಸ್. ಇದ್ದರು.







