ಮಾಸ್ಕ್ ಹಾಗೂ ವೈಯಕ್ತಿಕ ಅಂತರ ಮಾಯ
ಮೂಡುಬಿದಿರೆ : ಇಲ್ಲಿನ ಕೊಣಾಜೆಕಲ್ಲು ಸಿದ್ಧಾಶ್ರಮ ಚಾರಣಪ್ರಿಯ ಭಕ್ತರ ಪ್ರವಾಸಿ ತಾಣವೂ ಹೌದು. ಪ್ರತಿನಿತ್ಯ ಇಲ್ಲಿಗೆ ಭಕ್ತರು ಆಗಮಿಸಿ ದರುಶನ ಪಡೆದು ಅನ್ನಪ್ರಸಾದವನ್ನೂ ಸ್ವೀಕರಿಸುತ್ತಾರೆ.
ಸಿದ್ಧಾಶ್ರಮಕ್ಕೆ ಗ್ಯಾಸ್ ಸಿಲಿಂಡರ್ ಮತ್ತು ಬಯೋಗ್ಯಾಸ್ ಸಲಕರಣೆಯನ್ನು ಒದಗಿಸುವಂತೆ ಇಲ್ಲಿನ ಮುಖ್ಯಸ್ಥರು ಮೂಡುಬಿದಿರೆಯ ಮಹಿಳಾ ಸಂಘಟನೆಗೆ ಬೇಡಿಕೆ ಸಲ್ಲಿಸಿದ್ದರು.
ಮಾನವ ಹಕ್ಕುಮತ್ತು ಭೃಷ್ಟಾಚಾರ ವಿರೋಧಿ ಸಂಸ್ಥೆಯ ಮಹಿಳಾ ಘಟಕದ ಸದಸ್ಯರು ದಾನಿಗಳ ಸಹಕಾರದಿಂದ ಎರಡು ಗ್ಯಾಸ್ ಸಿಲಿಂಡರ್ ಗಳನ್ನು ಕೊಣಾಜೆಕಲ್ಲು ಸಿದ್ಧಾಶ್ರಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಆದರೆ ಈ ಸಂಧರ್ಭ ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಬೇಕೆಂಬ ಸಾಮಾನ್ಯ ಜ್ಞಾನವೂ ದಾನಿಗಳಿಗಾಗಲೀ; ಸಹಾಯ ಸ್ವೀಕರಿಸುವವರಿಗಾಗಲೀ ಇರಲಿಲ್ಲ.
ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಉಷಾ ಭಂಡಾರಿ, ಜಿಲ್ಲಾ ಸಮಿತಿ ಸದಸ್ಯೆ ಪದ್ಮಾವತಿ ಬಿ. ಶೆಟ್ಟಿ, ಶ್ರೀ ಗುರು ಮಹಿಳಾ ಮತ್ತು ಮಕ್ಕಳ ಹಕ್ಕು ಫೌಂಡೇಶನ್ (ರಿ.) ಇದರ ಸ್ಥಾಪಕ ಅಧ್ಯಕ್ಷೆ ಶ್ರೀವಿದ್ಯಾ ರಾಜೇಂದ್ರ ರಾವ್ ಅವರು ಸಿದ್ಧಾಶ್ರಮಕ್ಕೆ ಭೇಟಿ ನೀಡಿ ತಮ್ಮ ಕೊಡುಗೆಯನ್ನು ಹಸ್ತಾಂತರಿಸಿದರು. ಸಿದ್ಧಾಶ್ರಮದ ಗಣೇಶ್ ಗುರೂಜಿ ಮತ್ತು ತಂಡದವರು ಈ ಕೊಡುಗೆಯನ್ನು ಸ್ವೀಕರಿಸಿದರು. ಸಿದ್ಧಾಶ್ರಮದ ಬೇಡಿಕೆಯಾಗಿರುವ ಬಯೋಗ್ಯಾಸನ್ನೂ ದಾನಿಗಳ ಸಹಕಾರದಿಂದ ಶೀಘ್ರದಲ್ಲಿ ಒದಗಿಸಲಾಗುವುದು ಎಂದು ಸಂಘಟಕಿ ಉಷಾ ಭಂಡಾರಿ ಪತ್ರಿಕೆಗೆ ತಿಳಿಸಿದ್ದಾರೆ.







