ಇದನ್ನು ಕಂಡಾಗ ನಮ್ಮ ನಿಮ್ಮಲ್ಲಿ ಮೂಡುವ ಪ್ರಶ್ನೆ ‘ಹೀಗೂ ಉಂಟೇ’
ಇವರಲ್ಲಿ ಮಾಸ್ಕ್ ಇಲ್ಲ; ಒಂದಿಬ್ಬರಲ್ಲಿ ಇದ್ದರೂ ಅದು ಮುಖದ ಮೇಲಿರದೇ, ಕತ್ತಿಗೆ ನೆಕ್ಲೆಸ್ ಆಗಿದೆ. ಇವರೆಲ್ಲರಿಗೂ ವೈಯಕ್ತಿಕ ಅಂತರ ಏನೆಂದೇ ಗೊತ್ತಿಲ್ಲದವರಂತಿದ್ದಾರೆ. ಅಥವಾ ಮಾಸ್ಕ್ ಧರಿಸದಿದ್ದರೆ, ವೈಯಕ್ತಿಕ ಅಂತರ ಕಾಪಾಡದಿದ್ದರೆ ಏನಾಗ್ತದೆ ಎಂದು ವ್ಯವಸ್ಥೆಗೇ ಸವಾಲು ಹಾಕ ಹೊರಟಿದ್ದಾರೆ. ಇವರು ನಮ್ಮ ರಾಜಕೀಯ ನಾಯಕರು; ಶಾಸಕರ ಸಹಿತ ಜನಪ್ರತಿನಿಧಿಗಳು. ಒಂದರ್ಥದಲ್ಲಿ ಬೇಲಿಯೇ ಎದ್ದು ಹೊಲ ಮೆದ್ದಂತಿದೆ.

ಮೇ 19ರಂದು ಬೆಳ್ತಂಗಡಿಯ ಬಿಜೆಪಿ ಮಂಡಲ ಕಛೇರಿಯಲ್ಲಿ ನಡೆದ ಮಂಡಲ ಬಿಜೆಪಿ ಯುವ ಮೋರ್ಛಾ ಪದಾಧಿಕಾರಿಗಳ ಅಧಿಕೃತ ಘೋಷಣೆಯ ಸರಳ ಕಾರ್ಯಕ್ರಮವಿದು. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೈಕುರೆ ಸುಬ್ರಹ್ಮಣ್ಯ ಗೌಡ ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯ ಶ್ರೀನಿವಾಸ ರಾವ್; ಬಿಜೆಪಿಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಛಾ ಅಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ಯಶವಂತ ಗೌಡ ಬೆಳಾಲು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಉಮೇಶ್ ಕುಲಾಲ್ ಗುರುವಾಯನಕೆರೆಯವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಕೊರೋನಾ ಸೋಂಕು ಹರಡುವಿಕೆ ತಡೆಯಲು ಮುಂಜಾಗ್ರತೆಯಾಗಿ ಮಾಸ್ಕ್ ಧಾರಣೆ ಮತ್ತು ವೈಯಕ್ತಿಕ ಅಂತರ ಕಾಪಾಡುವುದು ಅತೀ ಮುಖ್ಯ ಎಂಬ ಜಾಗೃತಿಯ ಅರಿವಿರುವವರೇ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಮಾಸ್ಕ್ ಹಾಗೂ ವೈಯಕ್ತಿಕ ಅಂತರ ಮಾಯವಾಗಿರುವುದು ಆಶ್ಚರ್ಯವೇ ಆದರೂ ಸತ್ಯ; ಇದನ್ನು ಕಂಡಾಗ ನಮ್ಮ ನಿಮ್ಮಲ್ಲಿ ಮೂಡುವ ಪ್ರಶ್ನೆ ‘ಹೀಗೂ ಉಂಟೇ’






