ಮೇ 21ರಂದು ಬೆಳ್ತಂಗಡಿ ರೋಟರಿ ಕ್ಲಬ್ಬಿನವರು ಬೆಳ್ತಂಗಡಿ ಪೇಟೆಯಲ್ಲಿರುವ ಜೈ ಕನ್ನಡಮ್ಮ ಕಛೇರಿಗೆ ಸ್ಯಾನಿಟೈಸರ್ ಸ್ಟ್ಯಾಂಡನ್ನು ಕೊಡುಗೆಯಾಗಿ ನೀಡಿದರು.
ಸುವರ್ಣ ಮಹೋತ್ಸವದ ಸಂಭ್ರಮ ದಲ್ಲಿರುವ ಬೆಳ್ತಂಗಡಿ ರೋಟರಿ ಸಂಸ್ಥೆ ಈ ಬಾರಿ ಹತ್ತುಹಲವು ಸಮಾಜಮಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ. ಈ ನಡುವೆ ವಿಶ್ವಕ್ಕೇ ವಕ್ಕರಿಸಿದ ಕೊರೋನಾ ಸೋಂಕು ಹರಡುವಿಕೆ ತಡೆಯುವಲ್ಲಿ ಜನತೆಯಲ್ಲಿ ಜಾಗೃತಿ ಮೂಡಿಸಲು ಸಂಕಲ್ಪಿಸಿರುವ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಪದಾಧಿಕಾರಿಗಳು ಹಾಗೂ ಸದಸ್ಯರು ಸುಮಾರು 50 ಸಾರ್ವಜನಿಕ ಹಾಗೂ ಸರಕಾರಿ ಸಂಸ್ಥೆಗಳಿಗೆ ಸ್ಯಾನಿಟೈಸರ್ ಸ್ಟ್ಯಾಂಡ್ ನೀಡುವ ಮೂಲಕ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತೆಯಲ್ಲಿ ಮಾಸ್ಕ್ ಹಾಗೂ ವೈಯಕ್ತಿಕ ಅಂತರದಷ್ಟೇ ಮಹತ್ವ ಶುಚಿತ್ವಕ್ಕೂ ಇದೆ ಎಂಬ ಸಂದೇಶ ಸಾರಹೊರಟಿದ್ದಾರೆ.
ಜೈಕನ್ನಡಮ್ಮ ಕಛೇರಿಗೆ ಮೇ 21ರಂದು ಸ್ಯಾನಿಟೈಸರ್ ಯಂತ್ರ ಹಸ್ತಾಂತರಿಸುವ ಸಂದರ್ಭ ರೋಟರಿ ಅಧ್ಯಕ್ಷ ಜಯರಾಮ್, ಸುವರ್ಣ ಮಹೋತ್ಸವ ವರ್ಷದ ನಿಯೋಜಿತ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಸದಸ್ಯರಾದ ದಯಾನಂದ ನಾಯಕ್, ನಿವೃತ್ತ ಮೇಜರ್ ಜನರಲ್ ಎಂ. ವಿ. ಭಟ್ ಉಪಸ್ಥಿತರಿದ್ದರು. ಜೈಕನ್ನಡಮ್ಮ ಪತ್ರಿಕೆಯ ಸಂಪಾದಕ ದೇವಿ ಪ್ರಸಾದ್ ಹಾಗೂ ಸಹ ಸಂಪಾದಕಿ ಮಂಜುಳಾ ಡಿ. ಪ್ರಸಾದ್ ರೋಟರಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ದಿನ ಬೆಳ್ತಂಗಡಿಯ ಜೀವ ವಿಮಾ ನಿಗಮದ ಕಛೇರಿಗೂ ಸ್ಯಾನಿಟೈಸರ್ ಸ್ಟ್ಯಾಂಡ್ ನೀಡಲಾಯಿತು.






