ಸೇತುವೆ ದುರಸ್ಥಿ ಕಾಮಗಾರಿಯಲ್ಲೂ ನಿರ್ಲ್ಯಕ್ಷ ತೋರಿದ ಇಲಾಖಾಧಿಕಾರಿಗಳು
ಬೆಳ್ತಂಗಡಿ: ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್ನಿಂದ ರಾಷ್ಟ್ರೀಯ ಉದ್ಯಾನವನ ಅಲಂಬಕ್ಕೆ ಹೋಗುವ ರಸ್ತೆಯಲ್ಲಿರುವ ಕುಕ್ಕುಜೆ ಸೇತುವೆಯು ಸಂಪೂರ್ಣ ಶಿಥಿಲಗೊಂಡು ಮೇ.27ರಂದು ಸಂಜೆ ಕುಸಿದು ಬಿದ್ದಿದೆ. ಸುಮಾರು 45 ವರ್ಷಕ್ಕೂ ಹಳೆಯದಾದ ಈ ಸೇತುವೆಯ ಫಿಲ್ಲರ್ ಕುಸಿದು ಒಂದು ವರ್ಷ ಆಗುತ್ತಾ ಬಂದಿದ್ದು, ವಾಹನ ಚಾಲಕರಿಗೆ ಅಪಾಯವನ್ನು ತಂದಿತ್ತು. ಇದರ ದುರಸ್ತಿಗೆ ಈ ಭಾಗದ ನಾಗರಿಕರು ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಸೇತುವೆ ಶಿಥಿಲಗೊಂಡಿದ್ದರಿಂದ ಈ ಭಾಗದ ನೂರಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಗ್ರಾ.ಪಂ ನದಿಯಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಕೊಟ್ಟಿತ್ತು.

ಮೇ 27 ರಂದು ಇಲ್ಲಿ ಗುತ್ತಿಗೆದಾರರು ಪಿಲ್ಲರ್ ಅನ್ನು ಗಟ್ಟಿಗೊಳಿಸುವ ಪ್ರಯತ್ನದ ಭಾಗವಾಗಿ ಅಲ್ಲಿ ಸೇತುವೆಯ ಅಡಿಯಲ್ಲಿದ್ದ ಚರಳನ್ನು ತೆಗೆಯಲು ಮುಂದಾಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ವೇಳೆ ಸೇತುವೆ ಸಂಪೂರ್ಣ ಕುಸಿದು ಬಿದ್ದಿದ್ದು, ಈ ಭಾಗದ ಜನರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಪೂರ್ವ ಸಿದ್ಧತೆ ಇಲ್ಲದೇ, ಪರಿಣಾಮದ ಬಗ್ಗೆ ಮುಂದಾಲೋಚಿಸದೇ; ಸೇತುವೆ ದುರಸ್ಥಿಯ ಹೆಸರಲ್ಲಿ ಸೇತುವೆಯ ಅಡಿಭಾಗದ ಚರಳನ್ನು ತೆಗೆಯಲು ಅನುಮತಿ ನೀಡಿದ್ದು ಯಾರು.. ತನಿಖೆಯಾಗಬೇಕಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯರು ಭೇಟಿ ನೀಡಿದ್ದಾರೆ. ಇನ್ನೇನು. ಮಳೆಗಾಲ ಆರಂಭವಾಗುವ ಸೂಚನೆ ಇದ್ದು, ಈ ಭಾಗದ ಜನರಿಗೆ ಸಂಪೂರ್ಣವಾಗಿ ಸಂಪರ್ಕವೇ ಅಸಾಧ್ಯವಾಗಲಿದೆ. ಇಲಾಖೆಯ ನಿರ್ಲ್ಯಕ್ಷಕ್ಕೆ ಈ ಭಾಗದ ಜನತೆ ಪೇಟೆಯ ಸಂಪರ್ಕ ಕಡಿದುಕೊಂಡಿದ್ದು, ಈ ತಪ್ಪಿಗೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ






