ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು, ಮಲವಂತಿಗೆ, ಮುಂಡಾಜೆ ಕಡೆಯಿಂದ ಕಳೆದ ನಾಲ್ಕಾರು ತಿಂಗಳಿಂದ ನಿರಂತರವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೂ ಸಂಬಂಧಿತ ಇಲಾಖಾಧಿಕಾರಿಗಳು ತಮಗೆ ಸಿಕ್ಕಷ್ಟು ಅಕ್ರಮ ಹಣವನ್ನು ಜೇಬಿಗಿಳಿಸಿ, ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಸ್ಥಳೀಯ ಪರಿಸರ ಪ್ರೇಮಿಗಳು ಅಕ್ರಮ ಮರಳು ಸಾಗಾಟದ ಬಗ್ಗೆ ನೀಡಿದ ದೂರುಗಳು ಕಸದ ಬುಟ್ಟಿ ಸೇರಿದೆ.
ಇದೀಗ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಇಡೀ ಜಿಲ್ಲೆಯನ್ನೇ ಲಾಕ್ಡೌನ್ ಮಾಡುವಂತೆ ಆದೇಶಿಸಿದರೂ, ಈ ಮರಳು ಕಳ್ಳಸಾಗಾಟಗಾರರಿಗೆ ಜಿಲ್ಲಾಧಿಕಾರಿಯ ಈ ಲಾಕ್ಡೌನ್ ಆದೇಶ ಲಗಾವಾದಂತಿಲ್ಲ. ಮಧ್ಯರಾತ್ರಿ ಹಾಗೂ ಅಪರಾತ್ರಿ ಮಾತ್ರವಲ್ಲ; ಬೆಳಗ್ಗಿನ ಜಾವವೂ ಪೊಲೀಸರು ಬಂದರೆ ಮಾಹಿತಿ ನೀಡಲು ಕಿಲೋಮೀಟರ್ಗೆ ಓರ್ವನಂತೆ ರಸ್ತೆಯುದ್ದಕ್ಕೂ ಕಾವಲುಗಾರನನ್ನಿರಿಸಿ ಎಗ್ಗಿಲ್ಲದೇ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ.
ಇಂತಹುದೇ ಅಕ್ರಮ ಮರಳು ಸಾಗಾಟ ಲಾರಿಯೊಂದು ಜುಲೈ 17ರಂದು ಬೆಳಗ್ಗಿನ ಜಾವ ಕೊಲ್ಲಿ-ಕಿಲ್ಲೂರು ಸೇತುವೆ ಬಳಿಯಿಂದ ಅಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿದ್ದ ವೇಳೆ, ನಿದ್ರೆಯ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ, ಬಂಗಾಡಿ ಬಸದಿ ಸಮೀಪ ಪಲ್ಟಿಯಾದ ಘಟನೆ ಬೆಳಗ್ಗೆ 5ಗಂಟೆಗೆ ಸಂಭವಿಸಿದೆ. ಪೊಲೀಸ್ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಮನಸ್ಸು ಹಾಗೂ ಇಚ್ಛಾಶಕ್ತಿ ಇದ್ದರೆ, ಪಲ್ಟಿಯಾದ ಲಾರಿಯ ಇತಿಹಾಸ ಜಾಲಾಡಿದರೆ ಅಕ್ರಮ ಮರಳು ಗಣಿಗಾರಿಕೆಯ ಹಿಂದಿರುವ ಪ್ರಭಾವಿಗಳ ನಿಜಬಣ್ಣ ಬಯಲಿಗೆಳೆಯಬಹುದು.







