
ಬೆಳ್ತಂಗಡಿ: ಜುಲೈ 18ರ ರಾತ್ರಿ ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ಸ್ವಿಫ್ಟ್ ಕಾರೊಂದು ಮಳೆ ಹಾಗೂ ಮಂಜಿನಕಾರಣಕ್ಕೆ ದಾರಿಕಾಣದಾಗಿ; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರಿನ ಚಾಲಕ ಮೂಡಿಗೆರೆ ನಿವಾಸಿ ಸುಹೇಲ್(38) ಯಾನೆ ಬಬ್ಲು ಗಂಭೀರವಾಗಿ ಗಾಯಗೊಂಡ ಅವಘಡ ಸಂಭವಿಸಿದೆ.
ಅಪಘಾತ ಸಂಭವಿಸಿದ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಗಾಯಾಳು ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾರಲ್ಲೇ ಬಿದ್ದಿದ್ದ ಎನ್ನಲಾಗಿದೆ. ಕಾನೂನು ಮೀರಿ ಸಂಜೆಯಾದ ಬಳಿಕ ಚಾರ್ಮಾಡಿ ಘಾಟಿರಸ್ತೆಯ ಮೂಲಕ ಬಂದ ಈ ಕಾರಿನ ಚಾಲಕ ತಾನೇ ಅಪಾಯವನ್ನು ಆಹ್ವಾನಿಸಿಕೊಂಡಂತಿತ್ತು. ಇದೀಗ ಗಾಯಾಳು ಕಾರಿನ ಚಾಲಕನನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿ ಮುಖ್ಯ ವಿಚಾರ ತೀರಾ ನಾದುರಸ್ಥಿ ಮತ್ತು ಅಪಾಯಕಾರಿಯಾಗಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸಂಜೆಯ ಬಳಿಕ ವಾಹನ ಸಂಚಾರ ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಈಗಾಗಲೇ ಆದೇಶ ಹೊರಡಿಸಿದ್ದರೂ, ಈ ಸ್ವಿಫ್ಟ್ ಕಾರು ಕೊಟ್ಟಿಗೆಹಾರ ಚೆಕ್ಪೋಸ್ಟ್ ದಾಟಿ ಹ್ಯಾಗೆ ಬಂತು? ಇಲ್ಲಿನ ಚೆಕ್ಪೋಸ್ಟ್ನಲ್ಲಿ ಕರ್ತವ್ಯನಿರತ ಪೊಲೀಸರು ಕಡ್ಲೆಕಾಯಿ ತಿನ್ನುತ್ತಿದ್ದರೇ ಎಂಬ ಪ್ರಶ್ನೆಗೆ ಅಲ್ಲಿನ ಪೊಲೀಸ್ ಅಧಿಕಾರಿಗಳು ಉತ್ತರಿಸಬೇಕಾಗಿದೆ.







