ಬೆಳ್ತಂಗಡಿ : ರೆಡ್ ಮಾರ್ಕ್ಯೂರಿ ದಂಧೆ ಎಲ್ಲಾ ರಾಜ್ಯಗಳಲ್ಲಿಯೂ ಹೆಚ್ಚಾಗಿದ್ದು ಈಗ ಈ ದಂಧೆ ನಮ್ಮ ಜಿಲ್ಲೆಯಲ್ಲೂ ಕಾರ್ಯಾಚರಿಸುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಹಾಂದಿ ಗ್ರಾಮದ ಸರ್ಕಲ್ ಬಳಿ ಅಲ್ದೂರು ಪೊಲೀಸರು ಖಚಿತ ಮಾಹಿತಿ ಮೇರೆಗೆ ಪುತ್ತೂರು ನೊಂದವಣೆಯ ಅಲ್ಟೋ ಕಾರಿನಲ್ಲಿ ಖೋಟಾ ನೋಟು ಹಣ ಸಾಗಿಸುತ್ತಿದ್ದಾಗ ಅಡ್ಡಗಟ್ಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 500 ಮುಖಬೆಲೆಯ 5 ಲಕ್ಷ ರೂಪಾಯಿ ಖೋಟಾ ನೋಟುಗಳು ಅಲ್ಟೋ ಕಾರಿನಲ್ಲಿದ್ದ ಬ್ಯಾಗಿನಲ್ಲಿ ಪತ್ತೆಯಾಗಿದೆ. ಈ ಹಣ ರೆಡ್ ಮಾರ್ಕ್ಯೂರಿ ಖರೀದಿಸುವ ಉದ್ಧೇಶದಿಂದ ಬೆಳ್ತಂಗಡಿಯಿಂದ ಚಿಕ್ಕಮಗಳೂರು ಕಡೆ ಹೋಗುತ್ತಿರುವುದಾಗಿ ತನಿಖೆ ವೇಳೆ ತಿಳಿದುಬಂದಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಅಜಿಕುರಿ ನಿವಾಸಿ ಸಂತೋಷ್ ಹಾಗೂ ಮಂಗಳೂರು ಸುರತ್ಕಲ್ ನಿವಾಸಿ ನಜೀರ್ನನ್ನು ಅಲ್ದೂರು ಪೊಲೀಸರು ಬಂಧಿಸಿದ್ದು, ಜೊತೆಯಲ್ಲಿ ಮತ್ತೊಂದು ಬೆಂಗಾವಲು ಕಾರಿನಲ್ಲಿ ಬರುತ್ತಿದ್ದ ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಇನ್ನು ಖೋಟಾ ನೋಟು ಹಣ ಬೆಳ್ತಂಗಡಿಯಿಂದ ಚಿಕ್ಕಮಗಳೂರಿಗೆ ಸಾಗಾಟಕ್ಕೆ ಉಜಿರೆಯ ರಾಧಾಕೃಷ್ಟ ಭಂಡಾರಿ ಎಂಬವರ ಅಲ್ಟೋ ಕಾರನ್ನು ಆರೋಪಿಗಳು ಬಳಕ್ಕೆ ಮಾಡಿದ್ದು ಆ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಜಿರೆ, ಬೆಳ್ತಂಗಡಿ ಪರಿಸರದ ಹಲವು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಅಲ್ಟೋ ಕಾರಿನ ಜೊತೆ ಬೆಂಗಾವಲಾಗಿ ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ವಿಟ್ಲ ನಿವಾಸಿ ಜುಬೇದ್ ಹಾಗೂ ರಿಯಾಜ್ ಪರಾರಿಯಾಗಿದ್ದು, ಆವರಿಗಾಗಿ ಅಲ್ದೂರು ಪೊಲೀಸರು ಬಲೆ ಬಿಸಿದ್ದಾರೆ.
ಈ ಪ್ರಕರಣದಲ್ಲಿ ಹಿಂದೆ ದೊಡ್ಡ ಜಾಲವೇ ಇರುವ ಸಾಧ್ಯತೆ ಪ್ರಾಥಮಿಕ ತನಿಖೆ ವೇಳೆ ಸಿಕ್ಕಿದೆ ಎನ್ನಲಾಗಿದೆ. ಹಲವು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು ಆ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ಅಲ್ದೂರು ಪೊಲೀಸರು ಮುಂದುವರಿಸಿದ್ದಾರೆ.
ಬಂಧಿತ ಆರೋಪಿ ಧರ್ಮಸ್ಥಳದ ಸಂತೋಷ್ ಈ ಹಿಂದೆ ಚೈನ್ ಲಿಂಕ್ ಮೂಲಕ ಬಿಟ್ ಕಾಯಿನ್ ದಂಧೆ ಮಾಡಿ ಲಕ್ಷಾಂತರ ಹಣ ಜನರಿಗೆ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.






