ಬೆಳ್ತಂಗಡಿ: ದೇರಾಜೆ ಸೀತಾರಾಮಯ್ಯ ಕೃತಿ ’ಕುರುಕ್ಷೇತ್ರಕ್ಕೊಂದು ಆಯೋಗ’ ಇದರ ತೃತೀಯ ಮುದ್ರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ ಬೀಡಿನಲ್ಲಿ ಬಿಡುಗಡೆಗೊಳಿಸಿದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಹೆಗ್ಗಡೆಯವರು ಮಹಾಭಾರತದಲ್ಲಿ ಬರುವ ಮಹಾನ್ ವ್ಯಕ್ತಿಗಳ ಹಾಗೂ ಘಟನೆಗಳ ಮೇಲೆ ವಿಮರ್ಶಾತ್ಮಕವಾದ ಹೊಸ ಬೆಳಕನ್ನು ಈ ಕೃತಿಯಲ್ಲಿ ಲೇಖಕರು ಹಾಯಿಸಿದ್ದಾರೆ. ಚಮತ್ಕಾರಿಯಾದ ಕಲ್ಪನಾವಿಲಾಸದಿಂದ ಈ ಗ್ರಂಥವನ್ನು ರಚಿಸಿದ್ದಾರೆ. ಮಹಾಭಾರತದ ಘಟನಾವಳಿಗಳ ಮೇಲೆ ನೂತನ ಪ್ರಕಾಶವನ್ನು ಬೀರುವ ಈ ಗ್ರಂಥದಿಂದ ಧಾರ್ಮಿಕ ಜಿಜ್ಞಾಸೆಯು ಜಾಗೃತಗೊಂಡೀತು ಎಂಬ ವಿಶ್ವಾಸವಿದೆ ಎಂದರು.
ಈ ಪುಸ್ತಕ ಪ್ರಕಟಣೆಗೆ ವಿಶೇಷ ಸಹಕಾರ ನೀಡಿದ ಮುಂಬೈಯ ಉದ್ಯಮಿ ಶ್ರೀ ಕ್ಷೇತ್ರದ ಭಕ್ತರಾಗಿರುವ ನಂದಿಕೂರು ಕೊಳಚೂರುಗುತ್ತು ಜಗನ್ನಾಥ ಎನ್. ಶೆಟ್ಟಿ ಹಾಗೂ ಅವರ ಪತ್ನಿ, ಮಗ ಮತ್ತು ಸೊಸೆ, ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಕಾರ್ಯಕ್ರಮದ ಸಂಯೋಜಕ ಡಾ. ಶ್ರೀನಾಥ್ ಎಂ. ಪಿ. ಉಪಸ್ಥಿತರಿದ್ದರು.
ಉಜಿರೆಯ ಮಂಜುಶ್ರೀ ಪ್ರಿಂಟರ್ಸ್ನಲ್ಲಿ ಪುಸ್ತಕವು ಮುದ್ರಣಗೊಂಡಿದೆ.






