ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ರೀ ಅಯ್ಯಪ್ಪ ಭಜನಾ ಮಂದಿರ ದ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ(ರಿ) ನೇತೃತ್ವದಲ್ಲಿ ನಿರ್ಮಾಣಗೊಳ್ಳಲಿರುವ ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದ ನೂತನ ಸಭಾಭವನಕ್ಕೆ ಎಪ್ರಿಲ್ 29ರಂದು ಮುಂಜಾನೆ 7.10ರ ಶುಭ ಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. . ವೇದಮೂರ್ತಿ ರಾಮಕೃಷ್ಣ ಕಲ್ಲೂರಾಯರ ಪೌರೋಹಿತ್ಯದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷಾಬಲಿ, ಭೂವರಾಹ ಹೋಮ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಪರಿವಾರ ಸಾನ್ನಿಧ್ಯದಲ್ಲಿ ವಿಶೇಷ ಪ್ರಾರ್ಥನೆ-ಪೂಜೆ ಸಲ್ಲಿಸಿ ಸಮಾಜದ ಗೌರವಾಧ್ಯಕ್ಷರು ಹಾಗೂ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಜಯರಾಘವ ಪಡುವೆಟ್ಣಾಯರು ಶಿಲಾನ್ಯಾಸ ನೆರವೇರಿಸಿ ಸಭಾಭವನ ಅತೀ ಶೀಘ್ರದಲ್ಲಿ ನಿರ್ಮಾಣವಾಗಿ ಸಮಾಜಕ್ಕೆ ಸದುಪ ಯೋಗವಾಗುವಂತಾಗಲಿ ಎಂದು ಶುಭ ಹಾರೈಸಿದರು. ಸರಕಾರದ ಮಾರ್ಗಸೂಚಿಯಂತೆ ಯಾವುದೇ ಸಭೆ-ಸಮಾರಂಭಗಳಿಲ್ಲದೆ ಸರಳ-ಸಾಂಪ್ರದಾಯಿಕವಾಗಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾದ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ರಾಜಪ್ರಸಾದ್ ಪೋಳ್ನಾಯ, ಉಪಾಧ್ಯಕ್ಷ ನಾಗೇಶ ರಾವ್ ಮುಂಡ್ರುಪ್ಪಾಡಿ, ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಧರ್ಮಸ್ಥಳ ವಲಯ ಉಪಾಧ್ಯಕ್ಷ ಗಿರೀಶ್ ಕುದ್ರೆಂತಾಯ, ಉಜಿರೆ ವಲಯಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಇಂಜಿನಿಯರ್ ಸಂಪತ್ರತ್ನ ರಾವ್, ಪರಾರಿ ವೆಂಕಟ್ರಮಣ ಹೆಬ್ಬಾರ್, ದುರ್ಗಾಪ್ರಸಾದ್ ಪಡುವೆಟ್ಣಾಯ, ಜಯರಾಮ ಪಡ್ಡಿಲ್ಲಾಯ, ಮುರಳಿಕೃಷ್ಣ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.






