ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ। ಎಂ. ಮೋಹನ ಆಳ್ವರ ಹೃದಯವಂತಿಕೆಯಿಂದ ಇಲ್ಲಿನ ನೂತನ ನಿರ್ಮಿತ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನವು ಸಧ್ಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡಿದ್ದು, ಕೊರೋನಾ ಸಂಕಷ್ಟ ಕಾಲದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಈ ಉಚಿತ ಆರೋಗ್ಯ ಸೇವೆ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆಯಿದೆ.ಆಯುರ್ವೇದಿಕ್ ವೈದ್ಯರೂ ಆಗಿರುವ ಡಾ। ಎಂ. ಮೋಹನ ಆಳ್ವ ಅವರು ಸ್ವತಹ ಇಲ್ಲಿನ ಮೇಲುಸ್ತುವಾರಿಯನ್ನು ವಹಿಸಿಕೊಂಡು ಇಲ್ಲಿನ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಡೆಯುವಂತೆ ಶ್ರಮಿಸುತ್ತಿರುವುದು ಸರ್ವರ ಪ್ರಶಂಸೆಗೆ ಪಾತ್ರವಾಗಿದೆ.ಆರು ದಿನಗಳ ಹಿಂದೆ ಸ್ಥಳೀಯ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಈ ಉಚಿತ ಆರೋಗ್ಯ ವ್ಯವಸ್ಥೆಗೆ ಚಾಲನೆ ನೀಡಿದ್ದು, ಯಾರೂ ಭಯ ಪಡದೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನಕ್ಕೆ ಬಂದು ಉಚಿತವಾಗಿ ಇಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯನ್ನೂ ಸ್ವೀಕರಿಸಿ, ಅಗತ್ಯವಿದ್ದಲ್ಲಿ ಇಲ್ಲಿನ ವೈದ್ಯರ ಸೂಚನೆಯಂತೆ ಉಚಿತ ಔಷಧಿಗಳನ್ನೂ ಪಡೆದು ತೆರಳಬಹುದು. ಕೊರೋನಾ ಸಾಂಕ್ರಾಮಿಕದ ಈ ಸಂಕಷ್ಟ ಕಾಲದಲ್ಲಿ ಡಾl ಎಂ. ಮೋಹನ ಆಳ್ವರ ಈ ಪ್ರಯತ್ನ ಸಂಜೀವಿನಿಯಾಗಿದೆ ಎಂದಿದ್ದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಆರೋಗ್ಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಮತ್ತು ಕೆಲವು ವಿದ್ಯಾರ್ಥಿಗಳು ಇಲ್ಲಿ ಉಚಿತವಾಗಿ ನೀಡುತ್ತಿರುವ ಆರೋಗ್ಯ ಸೇವೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದು ಕಳೆದ ಆರು ದಿನಗಳಿಂದ 400ಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.






