ಬೆಳ್ತಂಗಡಿ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡು ಕಾನೂನನ್ನು ಗೌರವಿಸುವ ಹಾಗೂ ಸರಕಾರ ಸೂಚಿಸಿದ ಕೋವಿಡ್ ನಿಯಮ ಪಾಲಿಸುವ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ನಾಗರಿಕರ ಆತಂಕವನ್ನು ದೂರ ಮಾಡಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆಗಾಗಿ ಅಗತ್ಯ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸುತ್ತಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಮೇ 7ರಂದು ಬೆಳ್ತಂಗಡಿಯ ಶಾಸಕರ ಕಛೇರಿ ‘ಶ್ರಮಿಕ’ದಲ್ಲಿ ತಾಲೂಕಿನ ಆ್ಯಂಬುಲೆನ್ಸ್ ಸೇವೆ ಒದಗಿಸುವವರ ಸಭೆ ಕರೆದು ವಿಚಾರ ವಿನಿಮಯ ನಡೆಸಿದರು.ತಾಲೂಕಿನಲ್ಲಿ ಕೊರೋನಾ ಸೋಂಕಿತರಿಗೆ ಅಗತ್ಯ ಸೇವೆ ಒದಗಿಸಲು ಸದಾ ಸಿದ್ಧರಿರುವಂತೆ ಆ್ಯಂಬುಲೆನ್ಸ್ ಚಾಲಕ-ಮಾಲಕರನ್ನು ವಿನಂತಿಸಿದ ಶಾಸಕ ಹರೀಶ್ ಪೂಂಜ ತಾಲೂಕಿನಲ್ಲಿರುವ 18ಖಾಸಗಿ ಆ್ಯಂಬುಲೆನ್ಸ್ಗಳ ಸೇವೆಯನ್ನು ಗ್ರಾಮವಾರು ವಿಂಗಡಿಸಿದರಲ್ಲದೇ; ತಾಲೂಕಿನ ಎಲ್ಲ ಗ್ರಾಮಗಳಿಗೂ ತುರ್ತು ಅಗತ್ಯಕ್ಕೆ ಆ್ಯಂಬುಲೆನ್ಸ್ ಸೇವೆ ದೊರಕುವಂತಾಗಲು ಸಹಕಾರ ಕೋರಿದರು. ಇದರೊಂದಿಗೆ ತಾಲೂಕು ಆಸ್ಪತ್ರೆ ಮತ್ತು ಲಾಯ್ಲದ ವಿಶೇಷ ಕೋವಿಡ್ ಕೇರ್ ಸೆಂಟರ್ನಲ್ಲೂ ದಿನದ 24ಗಂಟೆ ಆ್ಯಂಬುಲೆನ್ಸ್ ಸೇವೆಗೆ ವ್ಯವಸ್ಥೆ ಮಾಡಲಾಗಿದ್ದು; ತಾಲೂಕಿನಲ್ಲಿ ಎಲ್ಲೇ ಯಾರಿಗಾದರೂ ತುರ್ತು ಆ್ಯಂಬುಲೆನ್ಸ್ ಸೇವೆ ಅಗತ್ಯವಿದ್ದರೆ ಶ್ರಮಿಕ ಸ್ಪಂದನ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.






