ಬೆಳ್ತಂಗಡಿ: ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸರಕಾರ ಘೋಷಿಸಿದ ಲಾಕ್ಡೌನ್ನಿಂದ ಹೊಟ್ಟೆಗೆ ಸಕಾಲದಲ್ಲಿ ಹಿಟ್ಟಿಲ್ಲದೇ ಸಂಕಷ್ಟದಲ್ಲಿರುವವರಿಗೆ ಕಳೆದ ನಾಲ್ಕಾರು ದಿನಗಳಿಂದ ನೂರಾರು ಮಂದಿಗೆ ಪ್ರತಿನಿತ್ಯ ಬೆಳ್ತಂಗಡಿ ಪರಿಸರದಲ್ಲಿ ಅನ್ನ ದಾಸೋಹದ ಮೂಲಕ ಮೌನವಾಗಿ ಸೇವೆ ಸಲ್ಲಿಸುತ್ತಿರುವ ಬೆಳ್ತಂಗಡಿಯ ನ್ಯಾಯವಾದಿ ಹಾಗೂ ನೋಟರಿ ಬಿ. ಮುರಳಿ ತಮ್ಮ ಮಕ್ಕಳಾದ ಬಿ. ಎಂ. ಮಯೂರ ಮತ್ತು ಬಿ. ಎಂ. ಮಂದಾರರೊಂದಿಗೆ ಮೇ 14ರಂದು ಮೇಲಂತಬೆಟ್ಟು ಮತ್ತು ಸವಣಾಲು ಗ್ರಾಮಗಳ 13ಮನೆಗಳಿಗೆ ಹದಿನೈದು ದಿನಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಅಶಕ್ತರಿಗೆ ಸಹಾಯಹಸ್ತ ಚಾಚಿದರು. ಈ ಸಂದರ್ಭದಲ್ಲಿ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರರಾಜ್, ಲೋಕನಾಥ್, ಚಂದ್ರಶೇಖರ, ಜಯಲಕ್ಷ್ಮಿ, ದೀಪಿಕಾ, ಗ್ರಾಮ ಪಂಚಾಯತ್ ಕಾರ್ಯದರ್ಶಿ ನಿರ್ಮಲ್ ಕುಮಾರ್ ಹಾಜರಿದ್ದರು.ನ್ಯಾಯವಾದಿ ಬಿ. ಮುರಳಿಯವರು ಕೆಲ ದಿನಗಳ ಹಿಂದೆಯಷ್ಟೇ ಶಿರ್ಲಾಲು ಗ್ರಾಮದ ಆಶಾ ಕಾರ್ಯಕರ್ತರಯರಿಗೆ ಮತ್ತು ಶಿರ್ಲಾಲಿನ 6ಬಡ ಕುಟುಂಬಿಕರಿಗೆ ಹದಿನೈದು ದಿನಗಳಿಗೆ ಬೇಕಾಗುವಷ್ಟು ಆಹಾರ ಧಾನ್ಯಗಳುಳ್ಳ ಕಿಟ್ ವಿತರಿಸಿದ್ದರು. ಇದೇ ಸಂದರ್ಭದಲ್ಲಿ ನ್ಯಾಯವಾದಿ ಮುರಳಿಯವರು ಹತ್ತು ಸ್ಟೀಮ್ ಮೆಷಿನ್ಗಳನ್ನು ಆಶಾ ಕಾರ್ಯಕರ್ತೆಯರಿಗೆ ಹಸ್ತಾಂತರಿಸಿದರು.








