ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಸ್ವಾಮಿ ಶ್ರೀ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಕೋವಿಡ್-19 ಪರಿಹಾರ ಕಾರ್ಯದಲ್ಲಿ ನೆರವಾಗಲು ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಸಹಯೋಗದೊಂದಿಗೆ ತಾಲೂಕಿನ ಮುಂಡೂರು ಗ್ರಾಮ ವ್ಯಾಪ್ತಿಯ ಕೋವಿಡ್ ಪೀಡಿತರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಮುಂಚೂಣಿಯ ಸ್ವಯಂಸೇವಕರ ಸಂಚಾರಕ್ಕೆ ಹಾಗೂ ಅಗತ್ಯವುಳ್ಳವರಿಗೆ ಆಹಾರ ಸಾಮಗ್ರಿ ಒದಗಿಸಲು ಟ್ರಸ್ಟ್ ವತಿಯಿಂದ ಎರಡು ವಾಹನಗಳನ್ನು ‘ವಿವೇಕಮಿತ್ರ ಕೋವಿಡ್-19’ ಹೆಸರಿನಲ್ಲಿ ಉಚಿತವಾಗಿ ಒದಗಿಸಲಾಗಿದೆ. ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಮೇ 22 ರಂದು ನಡೆದ ಸರಳ ಕಾರ್ಯಕ್ರಮದಲ್ಲಿ ‘ವಿವೇಕ ಮಿತ್ರ ಕೋವಿಡ್-19’ ಉಚಿತ ವಾಹನ ಸೇವೆಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಡಾl ಎಂ. ಎಂ. ದಯಾಕರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಟ್ರಸ್ಟಿ ಭಾಸ್ಕರ ಧರ್ಮಸ್ಥಳ, ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಮುಂಡೂರು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಯಾದವ ಕುಲಾಲ್, ಆಶಾ ಕಾರ್ಯಕರ್ತೆ ಸುಶೀಲ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಗತ್ಯವುಳ್ಳವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.






