ಬೆಳ್ತಂಗಡಿ: ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡ ಕೇವಲ ಅಂತ್ಯಸಂಸ್ಕಾರ ಕಾರ್ಯ ಮಾತ್ರ ಮಾಡದೆ, ಸರಕಾರದ ವಿವಿಧ ಇಲಾಖೆ ಜೊತೆ ಸೇರಿ ಕೋವಿಡ್ ಸಂಬಂಧಿತ ಇತರ ಸೇವೆಗಳನ್ನು ಕೈಗೊಳ್ಳುವ ಮೂಲಕ ತಮ್ಮ ಸೇವಾ ಕಾರ್ಯವನ್ನು ವಿಸ್ತರಿಸಿಕೊಂಡಿದೆ.ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ನೇತೃತ್ವದಲ್ಲಿ ಯಂಗ್ ಚಾಲೆಂಜರ್ ಕ್ರೀಡಾ ಸಂಘ ಮುಂಡಾಜೆ, ಗ್ರಾಮ ಪಂಚಾಯತ್ ಮುಂಡಾಜೆ ಹಾಗೂ ಅನಂತ ಫಡ್ಕೆ ಮೆಮೊರಿಯಲ್ ಟ್ರಸ್ಟ್ನ ಸಹಭಾಗಿತ್ವದಲ್ಲಿ ಮುಂಡಾಜೆಯ ಸೋಮಂತಡ್ಕದಲ್ಲಿ ಫಾಗಿಂಗ್ ಮತ್ತು ಸ್ಯಾನಿಟೈಸೇಷನ್ ಕಾರ್ಯಕ್ರಮ ನಡೆಯಿತು.ಮುಂಡಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದಿಶಾ ಪಟವರ್ಧನ್ ಮತ್ತು ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿ, ಮುಂಡಾಜೆ ಗ್ರಾಮವನ್ನು ಕೋವಿಡ್ ಮುಕ್ತಗೊಳಿಸಲಾಗುವುದು ಎಂದು ಪಣತೊಟ್ಟರು.ಮುಂಡಾಜೆಯ ಅನಿವಾಸಿ ಉದ್ಯಮಿ ಬೆನ್ನಿಯವರು ಈ ಸಂದರ್ಭದಲ್ಲಿ ವಿದ್ಯುತ್ ಚಾಲಿತ ಫಾಗಿಂಗ್ ಯಂತ್ರವನ್ನು ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡಕ್ಕೆ ಕೊಡುಗೆಯಾಗಿ ಹಸ್ತಾಂತರಿಸಿದರು. ಮಾನವ ಸ್ಪಂದನ ತಂಡದ ಸದಸ್ಯ ರಮೇಶ್ ಆಚಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ಕಾವ್ಯಾ ವೈಪನಾ, ಮುಂಡಾಜೆ ಸಹಕಾರಿ ಸಂಘದ ಸಿಇಒ ನಾರಾಯಣ ಫಡ್ಕೆ, ಅನಂತ ಫಡ್ಕೆ ಮೆಮೋರಿಯಲ್ ಟ್ರಸ್ಟ್ ನ ಸಂಚಾಲಕ ಪ್ರಹ್ಲಾದ ಫಡ್ಕೆ, ವರ್ತಕರ ಸಂಘದ ವಿ. ಜೆ. ಅಬ್ರಹಾಂ, ಮುಂಡಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಾರಾಯಣ ಗೌಡ ದೇವಸ್ಯ, ಗ್ರಾಮ ದೈವಸ್ಥಾನ ಸಮಿತಿ ಅಧ್ಯಕ್ಷ ದಿನೇಶ ಪಟವರ್ಧನ್, ನಾರಾಯಣ ಪೂಜಾರಿ, ಸುರೇಶ್ ಗೌಡ, ರೋಷನ್, ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಸದಸ್ಯ ಬಾಬು ಪೂಜಾರಿ ಕೂಳೂರು ವಂದಿಸಿದರು. ಕೋವಿಡ್ ಸೋಲ್ಜರ್ಸ್ ತಂಡದ ಕ್ಯಾಪ್ಟನ್ ಅಶ್ರಫ್ ಆಲಿಕುಂಞಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ತಾಲೂಕಿನಾದ್ಯಂತ ಮುಂದಕ್ಕೆ ಮಾನವ ಸ್ಪಂದನ ತಂಡಕೋವಿಡ್, ಡೆಂಗ್ಯೂ, ಮಲೇರಿಯಾ ಇತ್ಯಾದಿ ಕಾಯಿಲೆಗಳನ್ನು ತಡೆಗಟ್ಟುವ ಸಲುವಾಗಿ ಜನನಿಬಿಡ ಪ್ರದೇಶ, ಅಂಗಡಿ-ಮುಂಗಟ್ಟು, ಸರಕಾರಿ ಮತ್ತು ಖಾಸಗಿ ಕಚೇರಿ, ಎಟಿಎಂ ಮೊದಲಾದ ಕಡೆಗಳಲ್ಲಿ ಹಾಗೂ ಪ್ರಾರ್ಥನಾ ಮಂದಿರಗಳಲ್ಲಿ ಫಾಗಿಂಗ್ ಮತ್ತು ಸ್ಯಾನಿಟೈಸೇಷನ್ ಕಾರ್ಯ ಕೈಗೊಳ್ಳಲಿದೆ. ಗ್ರಾಮದ ಇತರ ಭಾಗಗಳಲ್ಲಿ ಅಗತ್ಯ ಸಂದರ್ಭಗಳಲ್ಲಿ ಸಂಘ-ಸಂಸ್ಥೆಗಳ ನೆರವಿನಿಂದ ಈ ಕಾರ್ಯಕ್ರಮ ನಿರಂತರ ನಡೆಯಲಿದೆ ಎಂದು ಮಾನವ ಸ್ಪಂದನ ತಂಡದ ಚೆಯರ್ಮ್ಯಾನ್ ಪಿ. ಸಿ. ಸೆಬಾಸ್ಟಿಯನ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.








