ಬೆಳ್ತಂಗಡಿ: ಕೋವಿಡ್ ನಿಯಂತ್ರಣ ಬಗ್ಗೆ ಜನಪ್ರತಿನಿಧಿಗಳು ಮತ್ತು ಸರಕಾರದ ವಿವಿಧ ಇಲಾಖೆಗಳ ಜೊತೆಗೆ ಕೈ ಜೋಡಿಸಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ನುರಿತ ವೈದ್ಯರ ತಂಡ ಮೇ 29ರಂದು ಬೆಳ್ತಂಗಡಿ ಪಟ್ಟಣ ಮತ್ತು ಲಾಯಿಲ ಗ್ರಾಮದ ಪಡ್ಲಾಡಿ ಕಂಟೋನ್ಮೆಂಟ್ ಪ್ರದೇಶದ ಮನೆಗಳ ಎಲ್ಲರ ಆರೋಗ್ಯ ತಪಾಸಣೆ ಹಾಗೂ ಸೇನಿಟೈಸರಿಂಗ್ ಮತ್ತು ಫಾಗಿಂಗ್ ಕಾರ್ಯವನ್ನು ಮಾಡಿತು.ಪಟ್ಟಣ ಪಂಚಾಯತ್ನಲ್ಲಿ ಆರಂಭವಾದ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವಾ, ಸದಸ್ಯೆ ಗೌರಿ, ಮುಖ್ಯಾಧಿಕಾರಿ ಸುಧಾಕರ್ ಎಂ. ಎಚ್., ಇಂಜಿನಿಯರ್ ಮಹಾವೀರ ಆರಿಗ, ನೋಡೆಲ್ ಸಚಿನ್ ಇವರು ಭಾಗಿಯಾದರು.ಮಾನವ ಸ್ಪಂದನ ತಂಡದ ಅಧ್ಯಕ್ಷ ಪಿ. ಸಿ. ಸೆಬಾಸ್ಟಿಯನ್ ಮತ್ತು ಕೋವಿಡ್ ಸೋಲ್ಜರ್ಸ್ ತಂಡದ ಕೇಪ್ಟನ್ ಅಶ್ರಫ್ ಆಲಿಕುಂಞಿ ನೇತೃತ್ವದಲ್ಲಿ, ಕಕ್ಕಿಂಜೆ ಸೈಂಟ್ ಜೋಸೆಫ್ ಆಸ್ಪತ್ರೆಯ ಸಹಭಾಗಿತ್ವದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮಾನವ ಸ್ಪಂದನ ತಂಡದ ಬಿ. ಕೆ. ವಸಂತ, ಪ್ರಸಾದ್ ಶೆಟ್ಟಿ ಏಣಿಂಜೆ, ರಮೇಶ್ ಆಚಾರ್ ಮತ್ತು ಅಜಿತ್ ಪಿ .ಎಮ್. ಇವರು ತೊಡಗಿಸಿಕೊಂಡರು. ಕಕ್ಕಿಂಜೆಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾl ನಿತಿನ್ ಎಂ. ಡಿ. ಎಲ್ಲರ ಆರೋಗ್ಯ ಪರೀಕ್ಷೆ ನಡೆಸಿಕೊಟ್ಟರು. ಆಸ್ಪತ್ರೆಯ ಮೆನೇಜರ್ ಸಿದ್ದೀಕ್ ಸಹಕರಿಸಿದರು. ತಂಡದಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋವಿಡ್ ಪಾಸಿಟಿವ್ ಮನೆಗಳಲ್ಲಿ, ಲಾಯಿಲ ಗ್ರಾಮದ ಪಡ್ಲಾಡಿ ಕಂಟೋನ್ಮೆಂಟ್ ವ್ಯಾಪ್ತಿಯ 14 ಮನೆಗಳಲ್ಲಿ, ಪಡ್ಲಾಡಿ ಮಿಲ್ಕ್ ಸೊಸೈಟಿ, 16 ಮಂದಿ ಕಾರ್ಮಿಕರಿಗೆ ಕೋವಿಡ್ ದೃಢಪಟ್ಟ ಕಾಶಿಬೆಟ್ಟು ಸ್ವಾಮಿ ಪ್ರಸಾದ್ ಇಂಡಸ್ಟ್ರೀಸ್ ವ್ಯಾಪ್ತಿಯಲ್ಲಿ ಮಾನವ ಸ್ಪಂದನ ತಂಡದ ವತಿಯಿಂದ ವ್ಯಕ್ತಿಗಳ ಆರೋಗ್ಯ ಪರೀಕ್ಷೆ, ಅವರ ಮನೆ ಮತ್ತು ಪರಿಸರದಲ್ಲಿ ಸೇನಿಟೈಸರ್ ಸಿಂಪಡಣೆ ಹಾಗೂ ಫಾಗಿಂಗ್ ನಡೆಸಲಾಯಿತು.






