ಬೆಳ್ತಂಗಡಿ: ಗ್ರಾಮೀಣ ಭಾಗದ ಜನರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರಿಸಿ, ಜಿಲ್ಲಾಡಳಿತದ ಸೂಚನೆಯಂತೆ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ವೈದ್ಯರ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ‘ವೈದ್ಯರ ನಡೆ ಹಳ್ಳಿಯ ಕಡೆ’ ಅಭಿಯಾನವನ್ನು ನಡೆಸಲಾಗುತ್ತದೆ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜೂನ್ 1ರಂದು ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆದ ಗ್ರಾಮ ಪಂಚಾಯತ್ ವಾರ್ ಕೋವಿಡ್-19 ನಿರ್ವಹಣಾ ಮತ್ತು ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯನ್ನುದ್ಧೇಶಿಸಿ ಮಾತನಾಡುತ್ತಿದ್ದರು.ಗ್ರಾಮೀಣ ಪ್ರದೇಶಗಳಲ್ಲಿ ವಯಸ್ಸಾದವರು ಬೇರೆಬೇರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಸ್ಥಳೀಯ ವೈದ್ಯರಿಂದ ಔಷಧಿ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂತಹವರ ಕೋವಿಡ್ ಪರೀಕ್ಷೆ ನಡೆಸಬೇಕು. ಅವರಲ್ಲಿ ಕೋವಿಡ್ ವರದಿ ಪಾಸಿಟಿವ್ ಬಂದರೆ, ಅಂತಹವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ಗೆ ಒಳಪಡಿಸಬೇಕು; ತಪ್ಪಿದಲ್ಲಿ ಸಂಬಂಧಿತ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರರಾಗಬೇಕಾಗುತ್ತದೆ. ಇದು ಎಲ್ಲರ ಗಮನದಲ್ಲೂ ಇರಲಿ ಎಂದು ಶಾಸಕ ಪೂಂಜ ಸೂಚ್ಯವಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಬಗ್ಗೆ ಎಚ್ಚರಿಸಿದರು.ತಾಲೂಕಿನ ಕರಿಮಣೇಲು, ನಾಲ್ಕೂರು, ಬಜಿರೆ, ಕುದ್ಯಾಡಿ, ಕೊಕ್ರಾಡಿ ಸಹಿತ ಸಾಕಷ್ಟು ಗ್ರಾಮಗಳು ಈಗಾಗಲೇ ಕೊರೋನಾ ಮುಕ್ತವಾಗಿದ್ದು, ಜೂನ್ 10ರೊಳಗೆ ಇನ್ನಷ್ಟು ಗ್ರಾಮಗಳು ಕೊರೋನಾ ಮುಕ್ತವಾಗಲು ಅಧಿಕಾರಿಗಳ ಹಾಗೂ ಸೋಂಕಿತರ ಸಹಕಾರ ಮುಖ್ಯ. ಅಧಿಕಾರಿಗಳು ಸೋಂಕಿತರ ಮೇಲೆ ನಿಗಾ ವಹಿಸಬೇಕು; ಸೋಂಕಿತರು ಮನೆಯಲ್ಲಿಯೇ ಕ್ವಾರಂಟೈನ್ ಆಗಬೇಕು, ಯಾವ ಕಾರಣಕ್ಕೂ ಹೊರಗೆ ಓಡಾಡಬಾರದು ಎಂದು ಸೂಚಿಸಿದ ಶಾಸಕ ಪೂಂಜ, ಸೋಂಕಿತರು ಹೊರಗಡೆ ತಿರುಗಾಡುವುದು ಕಂಡುಬಂದರೆ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಗ್ರಾಮ ಲೆಕ್ಕಿಗ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಪ್ರೊಬೆಷನರಿ ಎ.ಸಿ. ವೆಂಕಟೇಶ್, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ತಹಶೀಲ್ದಾರ್ ಜೆ. ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಆರೋಗ್ಯಾಧಿಕಾರಿ ಡಾl ಕಲಾಮಧು ಉಪಸ್ಥಿತರಿದ್ದರು.






