ಬೆಳ್ತಂಗಡಿ: ಕೊರೋನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ಉದ್ಧೇಶದಿಂದ ಸರಕಾರ ಘೋಷಿಸಿದ ಲಾಕ್ಡೌನ್ನಿಂದಾಗಿ ಸಾಕಷ್ಟು ಕುಟುಂಬಿಕರು ಸಂಕಷ್ಟವನ್ನೆದುರಿಸುತ್ತಿದ್ದು; ಇಂತಹ ಕುಟುಂಬಿಕರ ನೆರವಿಗೆ ತನ್ನ ಕೈಲಾದ ಸೇವೆ ಸಲ್ಲಿಸಲು ಕಾರ್ಯಯೋಜನೆ ರೂಪಿಸಿರುವ ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ, ತಾಲೂಕಿನ ಆಯ್ದ 50ಬಡ ಕುಟುಂಬಿಕರಿಗೆ ಅಂದಾಜು 50ಸಾವಿರ ರೂಪಾಯಿ ಮೌಲ್ಯದ ದಿನಬಳಕೆ ಆಹಾರಧಾನ್ಯಗಳ ಕಿಟ್ ವಿತರಣೆಗೆ ಮೇ 29ರಂದು ಸೊಸೈಟಿಯ ಎದುರುಗಡೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಂಕೇತಿಕವಾಗಿ ಕಿಟ್ ವಿತರಿಸಿ ಮಾತನಾಡಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಕೊರೋನಾ ಸೋಂಕಿನ ಈ ಸಂಕಷ್ಟದ ದಿನಗಳಲ್ಲಿ ತಾಲೂಕಿನ ಸಾಕಷ್ಟು ಸಂಘ-ಸಂಸ್ಥೆಗಳು ಅಶಕ್ತರಿಗೆ ನೆರವೀಯಲು ಮುಂದೆ ಬಂದಿದೆ. ಈ ನಿಟ್ಟಿನಲ್ಲಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮುಂಚೂಣಿಯಲ್ಲಿದ್ದು, ಇವರ ಸೇವೆ ಅನುಕರಣೀಯ ಮತ್ತು ಶ್ಲಾಘನೀಯ ಎಂದರು.ಸೊಸೈಟಿಯ ಆಡಳಿತ ಮಂಡಳಿ ಅಧ್ಯಕ್ಷ ಎಲೋಶಿಯಸ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳ ಕಿರುಪರಿಚಯ ನೀಡಿ ಎಲ್ಲರನ್ನು ಸ್ವಾಗತಿಸಿದರು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಅಲ್ಫೋನ್ಸ್ ಫ್ರಾಂಕೊ, ಆಗ್ನೆಸ್ ಜುಲಿಯಾನ ಬರ್ಬೊಜ, ಜೊಸೆಫಿನ್ ಪಿಂಟೊ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್, ಬೆಳ್ತಂಗಡಿ ಮುಖ್ಯ ಶಾಖಾ ವ್ಯವಸ್ಥಾಪಕ ವಾಲ್ಟರ್ ಡಿ’ಸೋಜ, ಅಳದಂಗಡಿ ಶಾಖಾ ವ್ಯವಸ್ಥಾಪಕಿ ಮಲ್ಲಿಕಾ ಮೋನಿಸ್ ಹಾಗೂ ಸಂಸ್ಥೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಜ್ಹೋನ್ ಅರ್ವಿನ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.






