ಬೆಳ್ತಂಗಡಿ: ರಾಜ್ಯ ಸರಕಾರದ ಕೋವಿಡ್-19 ನಿಯಮಾವಳಿಯನ್ನು ರಾಜ್ಯ ಸರಕಾರದ ಅರಣ್ಯ ಸಚಿವ ಅರವಿಂದ ಲಿಂಬಾವಳಿಯವರು ಉಲ್ಲಂಘಿಸಿದ ಪ್ರಕರಣ ಜೂನ್ 5ರಂದು ಧರ್ಮಸ್ಥಳದಲ್ಲಿ ನಡೆದಿದೆ.ರಾಜ್ಯ ಸರಕಾರ ಹೊರಡಿಸಿದ ಕೋವಿಡ್-19 ಲಾಕ್ಡೌನ್ ಮಾರ್ಗಸೂಚಿಯಂತೆ ರಾಜ್ಯದ ಎಲ್ಲ ದೇಗುಲಗಳು, ಚರ್ಚ್ಗಳು, ಮಸೀದಿಗಳ ಸಹಿತ ಎಲ್ಲ ಧರ್ಮೀಯರ ಎಲ್ಲ ಶ್ರದ್ಧಾಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸರಕಾರದ ಆದೇಶ ಎಂದ ಮೇಲೆ ಇದು ಸಚಿವರಿಂದ ಜನಸಾಮಾನ್ಯನವರೆಗೆ ಎಲ್ಲರಿಗೂ ಅನ್ವಯ. ಜೂನ್ 5ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸರಕಾರದ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಸರಕಾರದ ಕೋವಿಡ್-19 ಲಾಕ್ಡೌನ್ ನಿಯಮಾವಳಿಗೇ ಸವಾಲು ಹಾಕಿ ಧರ್ಮಸ್ಥಳದ ದೇಗುಲದೊಳಗೆ ಹೊಕ್ಕು ಶ್ರೀ ದೇವರ ದರುಶನ ಪಡೆಯುವ ಮೂಲಕ ಒಂದರ್ಥದಲ್ಲಿ ಸಚಿವರಾಗಿದ್ದು ಸರಕಾರದ ಭಾಗವಾಗಿ ಸರಕಾರದ ಮಾರ್ಗಸೂಚಿಯನ್ನೇ ಉಲ್ಲಂಘಿಸಿ ಸಂವಿದಾನಕ್ಕೇ ಸವಾಲು ಹಾಕಿದ್ದಾರೆ. ಈ ಪ್ರಕರಣ ಮೇಲ್ನೋಟಕ್ಕೆ ಹಾರ್ಮ್ಲೆಸ್ ಆಗಿ ಕಂಡರೂ ಸಚಿವ ಅರವಿಂದ ಲಿಂಬಾವಳಿಯವರ ಈ ನಡವಳಿಕೆ ಅವರು ಅವರೇ ಸಚಿವರಾಗಿರುವ ಸರಕಾರದ ನಿಯಮಗಳಿಗೆ ನೀಡುವ ಗೌರವಕ್ಕೆ ಹಿಡಿದ ಕನ್ನಡಿಯಾಗಿದೆ. ತನ್ನ ಪಕ್ಷದ ಸರಕಾರದ ಸಚಿವ ಅರವಿಂದ ಲಿಂಬಾವಳಿ ಸರಕಾರದ ನಿಯಮಗಳಿಗೆ ಸವಾಲು ಹಾಕುವಾಗ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಮೂಕ ಸಾಕ್ಷಿಯಾಗಿದ್ದರು. ಇಂತಹ ರಾಜಕಾರಣಿಗಳಿಗೆ ವಿದೇಯನಾಗಿ ಸಾಥ್ ನೀಡಿರುವ ತಾಲೂಕು ದಂಡಾಧಿಕಾರಿ ಮಹೇಶ್ ಜೆ. ತಾನೂ ದೇಗುಲಕ್ಕೆ ಭೇಟಿ ನೀಡಿ ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದು ಕಾರ್ಯಾಂಗ ವ್ಯವಸ್ಥೆಗೇ ಮಾಡಿರುವ ಅಪಚಾರ ಎಂಬುದು ಕಾನೂನು ತಜ್ಞರ ಅಭಿಪ್ರಾಯ.






