ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಗೆ ಅಡ್ಡವಾಗಿ ಧರಾಶಾಹಿಯಾದ ವಿದ್ಯುತ್ ಕಂಬಗಳು

ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಗೆ ಅಡ್ಡವಾಗಿ ಧರಾಶಾಹಿಯಾದ ವಿದ್ಯುತ್ ಕಂಬಗಳು
Facebook
Twitter
LinkedIn
WhatsApp

ಬೆಳ್ತಂಗಡಿ: ವ್ಯಾಪಕ ಮಳೆ ಹಾಗೂ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ನಡೆದಿದೆ.ನೆರಿಯ ಗ್ರಾಮದ ಅಣಿಯೂರಿನಿಂದ ಕಾಟಾಜೆ, ಪರ್ಪಳಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಕಳೆದ ಎಪ್ರಿಲ್ ನಿಂದ ನಡೆಯುತ್ತಿದೆ. ಈ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬಗಳು ಸೇರಿದಂತೆ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳ ವಿದ್ಯುತ್ ಪೂರೈಕೆ ಕಂಬಗಳು ಇದೆ. ಇಲ್ಲಿ ವಿದ್ಯುತ್ ಕಂಬಗಳ ಬುಡವನ್ನು ಕೊರೆದು ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸಲಾಗಿತ್ತು. ಕಳೆದ ಒಂದು ವಾರದಿಂದ ಸುರಿದ ವ್ಯಾಪಕ ಮಳೆಯಿಂದಾಗಿ ವಿದ್ಯುತ್ ಕಂಬಗಳ ಬುಡದಲ್ಲಿ ಮಣ್ಣು ಸವೆದು ಜೂನ್ 15ರ ರಾತ್ರಿ ಯೆನಪೋಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸೇರಿದ 8 ವಿದ್ಯುತ್ ಕಂಬಗಳು ರಸ್ತೆಯ ಮೇಲೆ ಉರುಳಿ ಬಿದ್ದಿದೆ. ಇಲ್ಲಿ ಇನ್ನಷ್ಟು ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಹೇಳುತ್ತಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿ ಹಾಗೂ ಧರೆಗುರುಳಿದ ವಿದ್ಯುತ್ ಕಂಬಗಳಿಂದಾಗಿ ಕಾಟಾಜೆ ಹಾಗೂ ಪರ್ಪಳ ನಿವಾಸಿಗರು ಪೇಟೆಯ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದರೊಂದಿಗೆ ಗಾಳಿ-ಮಳೆಯಿಂದಾಗಿ ಈ ಭಾಗದಲ್ಲಿ ಸಾಕಷ್ಟು ರಬ್ಬರ್, ಅಡಿಕೆ ತೋಟಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

Latest News

Related Posts