ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ ಹಾಗೂ ವಿಮುಕ್ತಿ ಲಾಯ್ಲದ ವತಿಯಿಂದ ಬೆಳ್ತಂಗಡಿ ತಾಲೂಕಿನ 15ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳ ಉಪಯೋಗಕ್ಕಾಗಿ 75ಅಕ್ಸಿಮೀಟರ್, 1,500ಸರ್ಜಿಕಲ್ ಮಾಸ್ಕ್ ಹಾಗೂ 1,500ಸರ್ಜಿಕಲ್ ಗ್ಲೌಸ್ಗಳನ್ನು ಜೂನ್ 23ರಂದು ಬೆಳ್ತಂಗಡಿಯ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದ ವಿಮುಕ್ತಿ ಸಂಸ್ಥೆಯ ನಿರ್ದೇಶಕ ವಂದನೀಯ ವಿನೋದ್ ಮಸ್ಕರೇನ್ಹಸ್, ಈ ಕೊಡುಗೆಯ ಸದ್ಬಳಕೆಯಾಗಲಿ ಎಂದು ಹಾರೈಸಿದರು. ಅಂತೆಯೇ ಈ ಸೌಲಭ್ಯವನ್ನು ವಿಮುಕ್ತಿ ಸಂಸ್ಥೆಯ ವತಿಯಿಂದ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲುಪಿಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.ತಾಲೂಕಿನ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊರೋನಾ ನಿಯಂತ್ರಣ ಕಾರ್ಯದಲ್ಲಿ ಸೇವಾ ಮನೋಭಾವದಲ್ಲಿ ತೊಡಗಿಸಿಕೊಂಡಿರುವುದನ್ನು ವಂದನೀಯ ವಿನೋದ್ ಮಸ್ಕರೇನ್ಹಸ್ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಪರವಾಗಿ ಕೃತಜ್ಞತಾ ಮಾತುಗಳನ್ನಾಡಿದ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ, ಕೋವಿಡ್ ನಿಯಂತ್ರಣ ಕಾರ್ಯಗಳಲ್ಲಿ ವಿಮುಕ್ತಿ ಸಂಸ್ಥೆಯ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಮುಕ್ತಿ ಸಂಸ್ಥೆಯ ಸಹನಿರ್ದೇಶಕ ವಂದನೀಯ ರೋಹನ್ ಲೋಬೋ, ಸಂಸ್ಥೆಯ ಶಿಕ್ಷಣ ಸಂಯೋಜಕಿ ಎಮಿಲ್ಡಾ, ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗದವರು ಹಾಜರಿದ್ದರು.






