ಬೆಳ್ತಂಗಡಿ: ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಇದರ ಸಕಾರಾತ್ಮಕ ಪರಿಣಾಮ ನಮ್ಮ ಕಣ್ಣೆದುರಿಗೆ ಬರಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.ಅವರು ಜೂನ್ 28ರಂದು ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಬುಡ್ಡೇಲುಮಾರು ರುದ್ರಭೂಮಿಯಲ್ಲಿ, ಗ್ರಾಮ ಪಂಚಾಯತ್ ಶಿರ್ಲಾಲು ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ನಡೆದ ಗಿಡನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.ಶಿರ್ಲಾಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು ಮಾತನಾಡಿ, ಗ್ರಾಮದ ವಿಕಾಸಕ್ಕೆ ಸಂಘ ಸಂಸ್ಥೆಗಳಿಗೆ ಬೇಕಾದ ಸಹಕಾರ ನೀಡಲು ಗ್ರಾಮ ಪಂಚಾಯತ್ ಬದ್ದವಾಗಿದೆ. ಇಲ್ಲಿನ ರುದ್ರಭೂಮಿಗೆ ಆವರಣ ಗೋಡೆ, ಕಟ್ಟಡ, ಸಿಲಿಕಾನ್ ಛೆಂಬರ್ ಇತ್ಯಾದಿಗಳ ವ್ಯವಸ್ಥೆಯನ್ನು ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿರುವ ಮೂರು ಕೆರೆಗಳ ಪುನರುತ್ಥಾನವನ್ನೂ ಯೋಜನೆಯ ಸಹಕಾರದೊಂದಿಗೆ ಮಾಡಲಾಗುವುದು. ಇದಕ್ಕೆ ನರೇಗಾದ ಸೌಲಭ್ಯವನ್ನೂ ಪಡೆಯಲಾಗುವುದು ಎಂದರು.ರುದ್ರಭೂಮಿ ಪರಿಸರದಲ್ಲಿ ಅರಣ್ಯ ಇಲಾಖೆಯವರು ಒದಗಿಸಿದ 200ಹಣ್ಣಿನ ಗಿಡಗಳ ನಾಟಿ ಕಾರ್ಯವನ್ನು ಶೌರ್ಯ ತಂಡದವರು ಕೈಗೊಂಡರು. ಈ ಸಂದರ್ಭ ಶಿರ್ಲಾಲು ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ ಗೌಡ, ಉಪಾಧ್ಯಕ್ಷ ಸುರೇಶ ನಾಯ್ಕ್, ಸದಸ್ಯರಾದ ಪ್ರಕಾಶ ಹೆಗ್ಡೆ, ಸೋಮನಾಥ, ಸುಶೀಲಾ, ಉಷಾ, ಶಿರ್ಲಾಲು ಸಿ.ಎ.ಬ್ಯಾಂಕ್ ಅಧ್ಯಕ್ಷ ನವೀನ್ ಸಾಮಾನಿ, ನಿರ್ದೇಶಕ ರಾಮ ಬಂಗೇರ, ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕಿಶೋರ ಹೆಗ್ಡೆ, ಕೇಳ್ಕರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಗ್ಡೆ, ಜಾತ್ರಾ ಸಮಿತಿ ಗೌರವಾಧ್ಯಕ್ಷ ಸುಧೀಶ ಹೆಗ್ಡೆ, ಅಧ್ಯಕ್ಷ ರಾಜಿತ್ ರೈ, ಯೋಜನಾಧಿಕಾರಿ ಯಶವಂತ, ಶೌರ್ಯ ಯೋಜನಾಧಿಕಾರಿ ಜಯವಂತ ಪಟಗಾರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಹರಿಣಿ, ಸೇವಾ ಪ್ರತಿನಿಧಿಗಳಾದ ನವೀನಾಕ್ಷಿ, ನಳಿನಿ, ಚಂದ್ರಾವತಿ, ಮಮತಾ, ಒಕ್ಕೂಟದ ಅಧ್ಯಕ್ಷರಾದ ಪ್ರತಾಪ ಮತ್ತು ಸುರೇಶ, ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.ಯೋಜನೆಯ ಅಳದಂಗಡಿ ವಲಯ ಮೇಲ್ವಿಚಾರಕಿ ಮಲ್ಲಿಕಾ ಸ್ವಾಗತಿಸಿದರು. ಶೌರ್ಯ ಘಟಕದ ಸಂಯೋಜಕ ಶ್ರೀಕಾಂತ ಪಟವರ್ಧನ್ ವಂದಿಸಿದರು.






