ಬೆಳ್ತಂಗಡಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ತಾಲೂಕು ಆರೋಗ್ಯ ಕೇಂದ್ರ ಬೆಳ್ತಂಗಡಿ ಇದರ ಸಹಯೋಗದಲ್ಲಿ ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಸಿಕಾ ಅಭಿಯಾನ ಜರುಗಿತು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಲಸಿಕಾ ಅಭಿಯಾನವನ್ನು ಉದ್ಘಾಟಿಸಿ, ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಶಿಸಿದರು. ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾl ವಿದ್ಯಾವತಿ, ಇಲಾಖೆಯ ಸಿಬ್ಬಂದಿಗಳಾದ ಮರಿಯಮ್ಮ, ಬೇಷ ಕುಮಾರಿ, ಕಮಲ, ರಂಜಿತಾ ಮತ್ತು ಗಿರೀಶ್, ಆಶಾ ಕಾರ್ಯಕರ್ತೆಯರಾದ ಅಕ್ಷಣಿ ಮತ್ತು ಲತಾ ಪಾಟೀಲ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಗಣಪತಿ ಭಟ್, ಐಕ್ಯೂಎಸಿ ಸಂಚಾಲಕ ರವಿಶಂಕರ ಬಿ, ಬೋಧಕ ಬೋಧಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗದವರಿಗೆ ಕಾಲೇಜಿನ ಪರವಾಗಿ ಅಭಿವಂದನೆಯನ್ನು ಸಲ್ಲಿಸಲಾಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೇಂಜರ್ಸ್ ಮತ್ತು ರೋವರ್ಸ್ ಘಟಕ, ಹಾಗೂ ಭಾರತೀಯ ಯುವ ರೆಡ್ ಕ್ರಾಸ್ ಘಟಕ ಇದರ ಸ್ವಯಂಸೇವಕರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸುಮಾರು 350 ಫಲಾನುಭವಿಗಳು ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.






