ಬೆಳ್ತಂಗಡಿ: ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಬೆಳ್ತಂಗಡಿ ತಾಲೂಕಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ತಾಲೂಕಿನ ಪ್ರತಿಷ್ಠಿತ ಸೊಸೈಟಿಗಳಲ್ಲೊಂದಾದ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮೂರನೇ ಶಾಖೆ ವೇಣೂರಿನಲ್ಲಿ ನಾಳೆ ಅಂದರೆ ಜುಲೈ 14ರಂದು ಉದ್ಘಾಟನೆಗೊಳ್ಳಲಿದ್ದು, ಸೊಸೈಟಿಯ ಅಧ್ಯಕ್ಷ ಹಾಗೂ ನ್ಯಾಯವಾದಿ ಎಲೋಶಿಯಸ್ ಲೋಬೊರ ಮಾರ್ಗದರ್ಶನದಲ್ಲಿ ಉದ್ಘಾಟನಾ ಕಾರ್ಯಕ್ರಮದ ಪೂರ್ವಸಿದ್ಧತೆ ಭರದಿಂದ ಸಾಗುತ್ತಿದೆ.ಬೆಳ್ತಂಗಡಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘ, ಈಗಾಗಲೇ ಅಳದಂಗಡಿ ಹಾಗೂ ನಾರಾವಿಯಲ್ಲಿ ಶಾಖೆಗಳನ್ನು ಹೊಂದಿದ್ದು; ಇದೀಗ ನಾಳೆ ವೇಣೂರಿನಲ್ಲಿ ಸೊಸೈಟಿಯ ಮೂರನೇ ಶಾಖೆ ಶುಭಾರಂಭಗೊಳ್ಳಲಿದೆ. ಬೆಳಿಗ್ಗೆ ಗಂಟೆ 10ಕ್ಕೆ ವೇಣೂರಿನ ಜಿನಪ್ರಸಾದ್ ಕಾಂಪ್ಲೆಕ್ಸ್ನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ನೂತನ ಶಾಖೆಯನ್ನು ಉದ್ಘಾಟಿಸಲಿರುವರು. ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ನ್ಯಾಯವಾದಿ ಎಲೋಶಿಯಸ್ ಲೋಬೊರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಉದ್ಘಾಟನಾ ಸಮಾರಂಭದಲ್ಲಿ ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರುಗಳಾದ ವಂದನೀಯ ಪೀಟರ್ ಅರನ್ಹಾ ಆಶೀರ್ವಚನ ನೀಡಲಿರುವರು. ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಮತ್ತು ಪ್ರತಾಪ್ಸಿಂಹ ನಾಯಕ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿರುವರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ. ನಾಯಕ್ ಶಾಖೆಯ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರೆ, ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂದನೀಯ ಜೋಸೆಫ್ ವಲಿಯಪರಂಬಿಲ್ ನಗದು ಪತ್ರ ವಿತರಣೆಗೆ ಚಾಲನೆ ನೀಡಲಿದ್ದಾರೆ. ವೇಣೂರು ಜುಮಾ ಮಸೀದಿಯ ಧರ್ಮಗುರುಗಳಾದ ಅಬ್ದುಲ್ ರಹಿಮಾನ್ ಸಖಾಫಿ, ಬೆಳ್ತಂಗಡಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಸುಕನ್ಯಾ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಜಯರಾಮ್ ಶೆಟ್ಟಿ ಖಂಡಿಗ, ವೇಣೂರಿನ ನಿವೃತ್ತ ಶಿಕ್ಷಕ ಎಲ್. ಜೆ. ಫೆರ್ನಾಂಡಿಸ್, ವೇಣೂರು ವಿವೇಕಾನಂದ ಟ್ರಸ್ಟ್ನ ಅಧ್ಯಕ್ಷ ವಿಜಯರಾಜ ಅತಿಕಾರಿ, ವೇಣೂರು ಗ್ರಾಮ ಪಂಚಾಯತ್ ಸದಸ್ಯ ಅರುಣ್ ಕ್ರಾಸ್ತಾ, ವೇಣೂರು ಚರ್ಚ್ನ ಪಾಲನಾ ಸಮಿತಿಯ ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ, ವೇಣೂರಿನ ಪ್ರಗತಿಪರ ಕೃಷಿಕ ಟಿ. ಆರ್. ನೊರೊನ್ಹಾ ಹಾಗೂ ವೇಣೂರು ಜಿನಪ್ರಸಾದ್ ಕಟ್ಟಡದ ಮಾಲಕಿ ಸರೋಜ ಜಿ. ಜೈನ್ ಮುಖ್ಯ ಅತಿಥಿಗಳಾಗಿ ಶುಭಹಾರೈಸಲಿರುವರು.ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ಹಾಗೂ ಸಿಬ್ಬಂದಿವರ್ಗದವರು ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.






