ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳಿಂದ ಗ್ರಾಮೀಣ ಬಡ ಜನತೆಯ ಬದುಕು ಇಂದು ಹಸನಾಗಿದೆ. ವೇಣೂರು ವಲಯದಲ್ಲಿ 326 ಸ್ವಸಹಾಯ ಸಂಘಗಳಿದ್ದು, ರೂಪಾಯಿ 1.45 ಕೋಟಿ ಲಾಭಾಂಶ ವಿತರಣೆ ಮಾಡುತ್ತಿದ್ದೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೇಣೂರು ವಲಯದ ಸ್ವಸಹಾಯ ಸಂಘಗಳ ಸದಸ್ಯರಿಗೆ ವೇಣೂರು ಶ್ರೀ ಭರತೇಶ ಸಭಾಭವನದಲ್ಲಿ ಜರಗಿದ ಲಾಭಾಂಶ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ವೇಣೂರು ಜೈನದಿಗಂಬರ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅತಿಕಾರಿ ಅವರು ಕಾರ್ಯಕ್ರಮದ ಅಧ್ಯಕ್ಷತರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಖಾವಂದರು ಸ್ವಸಹಾಯ ಸಂಘಗಳೆಂಬ ದೀಪಗಳನ್ನು ಬೆಳಗಿಸಿದ್ದರಿಂದ ಇಂದು ಎಲ್ಲರ ಬದುಕಲ್ಲಿ ಬೆಳಕು ಕಂಡಿದೆ. ಸಂಘದ ಸದಸ್ಯರು ಸ್ವಾವಲಂಬಿಗಳಾಗಲು ಡಾ. ಹೆಗ್ಗಡೆಯವರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.ಧರ್ಮಸ್ಥಳ ಕೆನರಾ ಬ್ಯಾಂಕಿನ ಹಿರಿಯ ಪ್ರಬಂಧಕ ಗಿರೀಶ್ ಸಂಘದ ಸದಸ್ಯರಿಗೆ ಲಾಭಾಂಶದ ಚೆಕ್ಕನ್ನು ವಿತರಣೆ ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾಧಿಕಾರಿ ಯಶವಂತ ಎಸ್. ಪ್ರಾಸ್ತಾವಿಸಿದರು.ಮುಖ್ಯ ಅತಿಥಿಗಳಾಗಿ ವೇಣೂರು ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿ ಸುಧಾಕರ ಡಿ., ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ವೇಣೂರು ವಲಯದ ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಜನಜಾಗೃತಿ ತಾಲೂಕು ಸಮಿತಿ ಸದಸ್ಯ ಗಿರೀಶ್ ಕೆ. ಎಸ್. ಸ್ವಾಗತಿಸಿ, ಅಶೋಕ್ ಕಜಿಪಟ್ಟ ವಂದಿಸಿದರು. ವಲಯ ಮೇಲ್ವಿಚಾರಕ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.






