ಬೆಳ್ತಂಗಡಿ: ತ್ಯಾಗ ಮತ್ತು ಬಲಿದಾನದ ಉದಾತ್ತ ಸಂದೇಶ ಸಾರುವ ಪವಿತ್ರ ಈದುಲ್ ಅಲ್ಹಾ ಬಕ್ರೀದ್ ಹಬ್ಬವನ್ನು ಇತಿಹಾಸ ಪ್ರಸಿದ್ಧ ಸರ್ವಧರ್ಮೀಯರ ಸೌಹಾರ್ದ ಸಮನ್ವಯ ಕ್ಷೇತ್ರ ಕಾಜೂರು ಮಸ್ಜಿದ್ನಲ್ಲಿ ಜುಲೈ 21ರಂದು ಆಚರಿಸಲಾಯಿತು.ಬಕ್ರೀದ್ ವಿಶೇಷ ಪ್ರಾರ್ಥನೆ, ಖುತುಬಾ ಪಾರಾಯಣ, ಪೆರ್ನಾಳ್ ನಮಾಝ್ಗೆ ಸಯ್ಯಿದ್ ಕಾಜೂರು ತಂಙಳ್ ನೇತೃತ್ವ ನೀಡಿದರು.ಜಗತ್ತಿಗೆ ಬಂದಿರುವ ಮಹಾಮಾರಿ ಕೊರೊನಾ ಹಾಗೂ ಸರ್ವ ವಿಪತ್ತುಗಳಿಂದ ನಾಡಿನ ವಿಮೋಚನೆಗಾಗಿ ಕಾಜೂರಿನಲ್ಲಿ ಅಂತ್ಯವಿಶ್ರಾಂತಿ ಹೊಂದಿದ ಪುಣ್ಯಪುರುಷರ ದರ್ಗಾಶರೀಫ್ನಲ್ಲಿ ಸರ್ವಧರ್ಮೀಯರಿಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ. ಯು. ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ. ಹೆಚ್. ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕಮಾಲ್ ಕೆ. ಎಮ್. ಸಹಿತ ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳು, ಸಹಾಯಕ ಧರ್ಮಗುರುಗಳು, ಶಿಕ್ಷಣ ಸಂಸ್ಥೆಗಳ ಅಧ್ಯಾಪಕವೃಂದದವರು ಹಾಗೂ ಜಮಾಅತ್ ಬಾಂಧವರು ಭಾಗವಹಿಸಿದ್ದರು.ಕೋವಿಡ್ ನಿಯಮಾವಳಿ ಪಾಲಿಸಿ ಸಂಕ್ಷಿಪ್ತ ರೀತಿಯಲ್ಲಿ ವಿಧಿವಿಧಾನಗಳು ನಡೆದವು.






