ಬೆಳ್ತಂಗಡಿ: ನರಸಿಂಹಗಡದ ತಪ್ಪಲಿನ ಕೂಡೆಲು ಪ್ರದೇಶದಲ್ಲಿ ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಲಾಯಿಲ ಇವರ ಸಹಯೋಗದಲ್ಲಿ ಆಗಸ್ಟ್ 1ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ‘ವೃಕ್ಷಯಜ್ಞ’ ಹಣ್ಣಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ 400ಕ್ಕೂ ಅಧಿಕ ಜನರಿಂದ ಕೂಡೆಲು ಪ್ರದೇಶದ ವಿವಿಧ ಭಾಗಗಳಲ್ಲಿ 1000 ಕ್ಕೂ ಮಿಕ್ಕಿ ಹಣ್ಣಿನ ಗಿಡಗಳನ್ನು ನೆಡಲಾಯಿತು.ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ರೋಟರಿ ಕ್ಲಬ್ ಅಧ್ಯಕ್ಷ ಶರತ್ಕೃಷ್ಣ ಪಡ್ವೆಟ್ನಾಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್, ಬದುಕು ಕಟ್ಟೋಣ ಬನ್ನಿ ತಂಡ ಸಂಚಾಲಕರಾದ ಮೋಹನ್ ಕುಮಾರ್ ಉಜಿರೆ ಮತ್ತು ರಾಜೇಶ್ ಪೈ ಉಜಿರೆ, ಬೆಳ್ತಂಗಡಿ ಅರಣ್ಯ ಇಲಾಖೆ ರೇಂಜರ್ ತ್ಯಾಗರಾಜ್, ತುಳುನಟ ಅರವಿಂದ ಬೋಳಾರ್, ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಗತಿ ಬಂಧು ಒಕ್ಕೂಟದ ಸದಸ್ಯರು, ಧರ್ಮಸ್ಥಳದ ಶೌರ್ಯ ವಿಪತ್ತು ತಂಡದ ಸದಸ್ಯರು, ಬೆಳ್ತಂಗಡಿ ರೋಟರಿ ಕ್ಲಬ್ ಸದಸ್ಯರು, ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು, ಬೆಳ್ತಂಗಡಿ ಅರಣ್ಯ ಇಲಾಖೆ ತಂಡ ಮತ್ತು ಲಾಯಿಲ ಹಾಗೂ ನಡ ಗ್ರಾಮಸ್ಥರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ತಿಮ್ಮಯ್ಯ ನಾಯ್ಕ್ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಬಿ. ಕೆ. ಧನಂಜಯ್ ರಾವ್ ನಿರೂಪಿಸಿದರು.






