ಬೆಳ್ತಂಗಡಿ: ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಮತ್ತು ಸ್ತ್ರೀಶಕ್ತಿ ಒಕ್ಕೂಟದ ಪದಾಧಿಕಾರಿಗಳು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಇದರೊಂದಿಗೆ ಸರಕಾರದ ಸೌಲಭ್ಯಗಳ ಮಾಹಿತಿಯನ್ನು ಪಡೆದುಕೊಂಡು ಕಟ್ಟಕಡೆಯ ಕುಟುಂಬಗಳಿಗೂ ಸರಕಾರದ ಸೌಲಭ್ಯ ಸಿಗುವಂತೆ ಮಾಡುವ ಮೂಲಕ ಸಬಲೀಕರಣಕ್ಕೆ ನೆರವಾಗಬೇಕು ಎಂದು ತಾಲೂಕು ಸಮಾಜಕಲ್ಯಾಣಾಧಿಕಾರಿ ಹೇಮಚಂದ್ರ ಹೇಳಿದರು.ಅವರು ಆಗಸ್ಟ್ 4ರಂದು ಬೆಳ್ತಂಗಡಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ (ರಿ.) ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಪಂಗಡ ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ನಡೆದ ಮೂರುದಿನಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬಗಳಿಗೆ ಸರಕಾರದಿಂದ ಅನೇಕ ಸೌಲಭ್ಯಗಳಿದ್ದು, ಇದು ಅವರಿಗೆ ತಲುಪಿದರೆ ಅವರ ಕುಟುಂಬವು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಬಹುದು ಎಂದರು.ಬೆಳ್ತಂಗಡಿ ತಾಲೂಕು ಪಂಚಾಯತ್ನ ಕಾರ್ಯಕ್ರಮ ಸಂಯೋಜಕ ಜಯಾನಂದ್ ಮಾತನಾಡಿ, ಹದಿನಾರು ವರ್ಷಗಳ ಹಿಂದೆ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಜ್ಯಾರಿಗೊಂಡ ಸ್ತ್ರೀ ಶಕ್ತಿ ಗುಂಪು ಚಟುವಟಿಕೆಗಳಿಂದ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಸಹಕಾರಿಯಾಗಿದೆ. ಈ ಕಾರ್ಯಕ್ರಮ ಸರಕಾರದ ಯೋಜನೆಯ ಮೂಲಕ ನಿರಂತರ ನಡೆಯುತ್ತಿದ್ದು ಎಲ್ಲರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ತಾಲೂಕು ಪ್ರಭಾರ ಸಿ.ಡಿ.ಪಿ.ಒ ಶ್ರೀಲತಾ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನಲ್ಲಿ 500ಕ್ಕೂ ಅಧಿಕ ಸ್ತ್ರೀಶಕ್ತಿ ಗುಂಪುಗಳಿದ್ದು, ಸಾವಿರಾರು ಸದಸ್ಯರು ಇದರಲ್ಲಿದ್ದಾರೆ. ಅಲ್ಲದೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ 28ಗುಂಪುಗಳಿದ್ದು ಸುಮಾರು 800ಕ್ಕೂ ಅಧಿಕ ಸದಸ್ಯರಿದ್ದಾರೆ. ಇವರಿಗೆ ಸರಕಾರದ ಸೌಲಭ್ಯವನ್ನು ತಲುಪಿಸಲು ಹಾಗೂ ಮಾಹಿತಿ ನೀಡಲು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಕೋವಿಡ್ ನಿಯಮವನ್ನು ಪಾಲಿಸಿ ತಲಾ 35ಮಂದಿ ಸದಸ್ಯರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಹಾಂ, ಸಮಾಲೋಚನಾ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಉಷಾ ನಾಯಕ್ ತರಬೇತುದಾರರಾಗಿ ಭಾಗವಹಿಸಿದ್ದರು.ತಾಲೂಕು ಮಹಿಳಾ ಒಕ್ಕೂಟದ ಕಾರ್ಯದರ್ಶಿ ಸುಮಲತಾ, ಹಿರಿಯ ಮೇಲ್ವಿಚಾರಕಿ ರತ್ನಾವತಿ ಉಪಸ್ಥಿತರಿದ್ದರು.ಹಿರಿಯ ಮೇಲ್ವಿಚಾರಕಿ ರತ್ನಾವತಿ ಸ್ವಾಗತಿಸಿ, ಮೇಲ್ವಿಚಾರಕಿ ಯಶೋಧಾ ವಂದಿಸಿದರು. ಮೇಲ್ವಿಚಾರಕಿ ನಂದನ ಕಾರ್ಯಕ್ರಮ ನಿರೂಪಿಸಿದರು.






