ಬೆಳ್ತಂಗಡಿ : ಪ್ರಸ್ತುತ ಪರಿಸ್ಥಿತಿಯಲ್ಲಿ ವ್ಯಾಪಾರ ಮತ್ತು ಉದ್ದಿಮೆಗಳು ಸಂಕಷ್ಟದಲ್ಲಿದ್ದು ಇದಕ್ಕಾಗಿ ಉದ್ಯಮಿಗಳ ಮತ್ತು ಉದ್ಯೋಗಿಗಳ ರಕ್ಷಣೆಗೆ ಮತ್ತು ನ್ಯಾಯಯುತ ಹಕ್ಕುಗಳನ್ನು ಪಡೆಯಲು ಬೆಳ್ತಂಗಡಿ ತಾಲೂಕು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘವನ್ನು ಪ್ರಾರಂಭಿಸಲಾಗಿದೆ ಎಂದು ಉದ್ಯಮಿ ಜಯರಾಮ್ ಹೇಳಿದ್ದಾರೆ.ಅವರು ಸೆಪ್ಟೆಂಬರ್ 1ರಂದು ಬೆಳ್ತಂಗಡಿಯ ಪ್ರೆಸ್ಕ್ಲಬ್ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಾರಂಭದಲ್ಲಿ ಬೆಳ್ತಂಗಡಿ, ಲಾಯ್ಲ, ಮದ್ದಡ್ಕ ಮತ್ತು ಗುರುವಾಯನಕೆರೆಯ ಉದ್ಯಮಿಗಳು ಮತ್ತು ವರ್ತಕರು ಒಟ್ಟುಸೇರಿ ಸಂಘವನ್ನು ಪ್ರಾರಂಭಿಸಲಾಗುತ್ತಿದ್ದು, ಬಳಿಕ ತಾಲೂಕಿನಾದ್ಯಂತ ಸಂಘಟನೆ ಬಲಪಡಿಸಲಾಗುತ್ತದೆ. ಇದರಲ್ಲಿ ಸಮಾಜ ಸೇವೆಯ ಒಂದು ಅಂಶವೂ ಇದ್ದು ರಕ್ತದಾನ ಶಿಬಿರ, ಸಂಕಷ್ಟಕ್ಕೊಳಗಾದ ವ್ಯಾಪಾರಿಗಳಿಗೆ ನೆರವು ನೀಡುವುದು, ಉದ್ಯೋಗ ಕೌಶಲ್ಯ ತರಬೇತಿ, ತಾಲೂಕಿನಲ್ಲಿ ಉದ್ಯಮಿ ಸ್ನೇಹಿ ವಾತಾವರಣ ಕಲ್ಪಿಸುವುದು, ಉದ್ಯೋಗ ಸೃಷ್ಠಿ ಮಾಡುವುದು, ಅಗತ್ಯ ಮಾಹಿತಿ, ವೃತ್ತಿ ಕೌಶಲ್ಯ ಕಾರ್ಯಾಗಾರ ಆಯೋಜಿಸುವುದು, ಆನ್ಲೈನ್ ವ್ಯಾಪಾರದ ನಡುವೆ ವ್ಯವಹಾರ ನಡೆಸಲು ಯೋಜನೆ ರೂಪಿಸುವುದು, ಹೊಸ ಹೊಸ ತಂತ್ರಜ್ಞಾನ ತಿಳುವಳಿಕೆ ನೀಡುವುದು ಮುಂತಾದ ಯೋಜನೆಗಳನ್ನು ಮಾಡಲಾಗಿದೆ. ಕೋವಿಡ್ ಸಮಯದಲ್ಲಿ ಸರಕಾರದ ನಿಯಮಗಳನ್ನು ಪಾಲಿಸುವುದರ ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಂದರು.ವೀಕ್ಎಂಡ್ ಕರ್ಫ್ಯೂನಲ್ಲಿ ತಾರತಮ್ಯ ಮಾಡಲಾಗುತ್ತಿದ್ದು ಈ ಬಗ್ಗೆ ಸರಕಾರ ಸರಿಯಾದ ನಿಲುವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿಗಳಾದ ಜಗದೀಶ್ ಡಿ, ಪ್ರಮೋದ್ ಆರ್. ನಾಯಕ್, ಯಶವಂತ ಪಟವರ್ಧನ್, ರೊನಾಲ್ಡ್ ಲೋಬೋ, ಯೇಸುದಾಸ್ ಉಪಸ್ಥಿತರಿದ್ದರು.






