ಬೆಳ್ತಂಗಡಿ: ಉಜಿರೆಯಲ್ಲಿ ಅಕ್ಟೋಬರ್ 12ರಂದು ಸುರಿದ ಭಾರೀ ಮಳೆಗೆ ರಸ್ತೆಗೆ ನುಗ್ಗಿ ಹರಿದ ನೀರಿನಿಂದಾಗಿ ರಾಷ್ಟ್ರೀಯ ಹೆದ್ದಾರಿಯೇ ಹೊಳೆಯಾಗಿ ಮಾರ್ಪಟ್ಟು ಸಾರ್ವಜನಿಕರು ಹಾಗೂ ವಾಹನ ಸವಾರರು ಮನೆ ತಲುಪಲು ಹರಸಾಹಸ ಪಟ್ಟ ಬಗ್ಗೆ ವರದಿಯಾಗಿದೆ. ಸುದೈವವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಅಕ್ಟೋಬರ್ 12ರಂದು ಎಡೆಬಿಡದೆ ಸುರಿದ ಮಳೆಗೆ ಉಜಿರೆ ಸಹಿತ ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಜನ ತತ್ತರಿಸಿ ಹೋಗಿದ್ದರು. ವರುಣನಾರ್ಭಟಕ್ಕೆ ತಾಲೂಕಿನಲ್ಲಿ ಜನಜೀವನವೇ ಅಕ್ಷರಶಃ ಸ್ತಬ್ಧಗೊಂಡಿತ್ತು. ಜನ ಭಯಭೀತರಾಗಿ ತಮ್ಮತಮ್ಮ ಮನೆ ಸೇರಿ ಶಾಂತನಾಗುವಂತೆ ವರುಣದೇವನಲ್ಲಿ ಪ್ರಾರ್ಥಿಸುವಷ್ಟರ ಮಟ್ಟಿಗೆ ಆತಂಕಗೊಂಡಿದ್ದರು. ಉಜಿರೆಯ ರಾಷ್ಟ್ರೀಯ ಹೆದ್ದಾರಿ ಅಕ್ಷರಶಃ ಹೊಳೆಯಂತಾದುದು ಉದಾಹರಣೆ ಮಾತ್ರ. ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲೂ ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಹೊಳೆಯನ್ನೂ ನಾಚಿಸುವಂತೆ ನೀರು ಹರಿಯುತ್ತಿತ್ತು. ಒಟ್ಟಿನಲ್ಲಿ ವರುಣನಾರ್ಭಟಕ್ಕೆ ತಾಲೂಕಿನ ಜನತೆ ನಲುಗಿ ಹೋಗಿದ್ದಾರೆ. ಎಲ್ಲಿಯೂ ಯಾವುದೇ ಆಸ್ತಿಪಾಸ್ತಿ ಹಾನಿಯಾಗದಿರಲಿ ಎಂದು ಹಾರೈಸುವುದೊಂದೇ ಜನತೆಗೆ ಉಳಿದಿರುವ ಮಾರ್ಗ.






