ಬೆಳ್ತಂಗಡಿ ಡಿಕೆಆರ್‌ಡಿಎಸ್ ಸಂಸ್ಥೆಯಿಂದ ವಿಶ್ವ ಏಡ್ಸ್ ದಿನಾಚರಣೆ

ಬೆಳ್ತಂಗಡಿ ಡಿಕೆಆರ್‌ಡಿಎಸ್ ಸಂಸ್ಥೆಯಿಂದ ವಿಶ್ವ ಏಡ್ಸ್ ದಿನಾಚರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ಹೆಚ್‌ಐವಿ ರೋಗ ಹರಡುವಿಕೆ ಈಗ ಕಡಿಮೆಯಾಗಿದೆ. ಇದರ ಬಗ್ಗೆ ಬಹಳಷ್ಟು ಜನಜಾಗೃತಿ ಉಂಟಾಗಿದೆ. ರೋಗ ಪೀಡಿತರು ಮರಣ ಹೊಂದುತ್ತಾರೆ ಎಂಬ ಅಭಿಪ್ರಾಯ ಇತ್ತು. ನಮ್ಮ ಡಿಕೆಆರ್‌ಡಿಎಸ್ ಸಂಸ್ಥೆಯಿಂದ ಏಡ್ಸ್ ಬಾಧಿತರಿಗೆ ಮತ್ತು ಸೋಂಕಿತರಿಗೆ ಎಲ್ಲರಂತೆ ಸಮಾನ ಬದುಕು ಕಟ್ಟಿಕೊಡುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಎಲ್ಲರೂ ಅವರ ಸೇವೆಗೆ ಸ್ವಯಂ ಪ್ರೇರಿತರಾಗಿ ತೊಡಗಿಕೊಳ್ಳಬೇಕು ಎಂದು ಡಿಕೆಆರ್‌ಡಿಎಸ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.ಅವರು ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿಯ (ಡಿಕೆಆರ್‌ಡಿಎಸ್) ನೇತೃತ್ವದಲ್ಲಿ ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ, ನವಚೈತನ್ಯ ಸಂಘ ಬೆಳ್ತಂಗಡಿ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 1ರಂದು ಬೆಳ್ತಂಗಡಿಯ ಸಾಂತೋಮ್ ಟವರ್ ಸಭಾಂಗಣದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ರತ್ನಾವತಿ ಮಾತನಾಡಿ, ಏಡ್ಸ್ ಬಾಧಿಸಿದರೆ ಅದು ಮೂರನೇ ಹಂತಕ್ಕೆ ಬರುವುದಲ್ಲ.ಮೊದಲ‌ ಹಂತದಲ್ಲೇ ಅದನ್ನು ಪತ್ತೆಹಚ್ಚಿ ಅಂತವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕಾರ್ಯವನ್ನು ಹಾಗೂ ರೋಗವನ್ನು ಬಾರದಂತೆ ಮುನ್ನಚ್ಚರಿಕೆಯ ಜಾಗೃತಿ ಮೂಡಿಸುವ ಕಾರ್ಯವನ್ನು ಡಿಕೆಆರ್‌ಡಿಎಸ್ ಸಂಸ್ಥೆ ನಡೆಸಿಕೊಂಡು ಬರುತ್ತಿದೆ ಎಂದರು.ಏಡ್ಸ್ ಪೀಡಿತರಿಗೆ ಹಾಗೂ ಬಾಧಿತರಿಗೆ ಪೌಷ್ಟಿಕ ಅಹಾರವನ್ನು ಕುಟ್ರುಪಾಡಿ ಚರ್ಚ್‌ನ ಧರ್ಮಗುರು ವಂದನೀಯ ಜೋಸ್ ಅಯಾಂಗುಡಿ ವಿತರಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶ್ರೀ ಕೃಷ್ಣ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾl ಮುರಳಿಕೃಷ್ಣ ಇರ್ವತ್ರಾಯ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಎ. ಮಾತನಾಡಿ; ಏಡ್ಸ್ ರೋಗದ ಗುಣ ಲಕ್ಷಣಗಳು, ಬಾರದಂತೆ ಮತ್ತು ಹರಡದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ನವ ಚೈತನ್ಯ ಸಂಘ ಬೆಳ್ತಂಗಡಿಯ ಅಧ್ಯಕ್ಷೆ ಲಲಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಂದಾದೀಪ ತಂಡದವರಿಂದ ಜಾಗೃತಿ ಗೀತೆ ಮೊಳಗಿತು. ಈ ಹಿಂದೆ 11ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ನೆಲ್ಯಾಡಿ ಕುಟ್ರುಪ್ಪಾಡಿ ಸೈಂಟ್ ಮೇರಿಸ್ ಚರ್ಚ್ ಧರ್ಮಗುರುಗಳಾದ ವಂದನೀಯ ಜೋಸ್ ಅಯಾಂಗುಡಿ ಅವರನ್ನು ಬಿಷಪ್ ಅವರು ಸಮ್ಮಾನಿಸಿದರು. ಹಾಲಿ ನಿರ್ದೇಶಕ ವಂದನೀಯ ಬಿನೋಯ್ ಎ. ಜೆ. ಪ್ರಸ್ತಾವನೆಗೈದು ಸ್ವಾಗತಿಸಿದರು. ಸಿಸಿಲಿಯಾ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.ಕಾರಿತಾಸ್ ಇಂಡಿಯಾ ಸಂಸ್ಥೆಯಿಂದ ನೀಡಲಾದ ಸುರಕ್ಷಾ ಕಿಟ್ ವಿತರಿಸಲಾಯಿತು. ಮುಂಡಾಜೆ ಸ್ಟಾರ್ ಸಂಘದ ಸದಸ್ಯರು ಪ್ರಾರ್ಥನಾ ಗೀತೆ ಹಾಡಿದರು. ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಎಲಿಯಮ್ಮ ವಂದಿಸಿದರು.

Latest 5

Related Posts