ಬೆಳ್ತಂಗಡಿ: ಎನ್. ಎಸ್. ಗೋಖಲೆ ಸಂಸ್ಮರಣಾ ಸಮಿತಿಯ ಆಶ್ರಯದಲ್ಲಿ ಯೆನಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ,ದೇರಳಕಟ್ಟೆ ಮಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಡಾಜೆಯ ಸಹಭಾಗಿತ್ವದಲ್ಲಿ, ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಭಜಕರು, ಚಿತ್ಪಾವನ ಸಂಘಟನೆ ಮುಂಡಾಜೆ, ರೋಟರಿ ಸಮುದಾಯದಳ ಮುಂಡಾಜೆ, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಮುಂಡಾಜೆ ಇವರ ಸಹಕಾರದಲ್ಲಿ ಜೂನ್ 19ರಂದು ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಉಚಿತ ವೈದ್ಯಕೀಯ ಶಿಬಿರ, ನೇತ್ರ ತಪಾಸಣೆ ಮತ್ತು ರಕ್ತಗುಂಪು ವರ್ಗೀಕರಣ ಕಾರ್ಯಕ್ರಮ ಜರಗಿತು.ಬೆಳ್ತಂಗಡಿ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷ ನಿವೃತ್ತ ಮೇಜರ್ ಎಂ. ವಿ. ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರಿ ರಂಗದ ಭೀಷ್ಮ ಎನ್. ಎಸ್. ಗೋಖಲೆ ಯವರ ದಕ್ಷತೆ, ಪ್ರಾಮಾಣಿಕ ದುಡಿಮೆಯ ಫಲವಾಗಿ ಹುಟ್ಟಿರುವ ಹಲವಾರು ಸಂಘಸಂಸ್ಥೆಗಳು ಇಂದು ಸಮಾಜಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತಿವೆ. ಆರೋಗ್ಯ ಶಿಬಿರಗಳು ಜನ ಸಾಮಾನ್ಯರ ಆರೋಗ್ಯ ರಕ್ಷಣೆಗೆ ಅನುಕೂಲ ನೀಡುತ್ತವೆ ಎಂದು ತಿಳಿಸಿದರು.ಚಿತ್ಪಾವನ ಸಂಘಟನೆ ಅಧ್ಯಕ್ಷ ವಾಸುದೇವ ಗೋಖಲೆ ಅಧ್ಯಕ್ಷತೆ ವಹಿಸಿದ್ದರು.ಯೆನೆಪೋಯ ಆಸ್ಪತ್ರೆಯ ವೈದ್ಯ ಡಾ| ಅಬ್ದುಲ್ ರಝಾಕ್, ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಮೊಕ್ತೇಸರ ಕಜೆ ವೆಂಕಟೇಶ್ವರ ಭಟ್, ರೋಟರಿ ಸಮುದಾಯ ದಳದ ಅಧ್ಯಕ್ಷ ಪಿ. ಸಿ. ಸೆಬಾಸ್ಟಿಯನ್, ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶ ನಾರಾಯಣ್ ರಾವ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಂಧು ಮತ್ತಿತರರು ಉಪಸ್ಥಿತರಿದ್ದರು.ಅಶೋಕ ಬರ್ವೆ ಸ್ವಾಗತಿಸಿದರು. ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ಕಾರ್ಯಕ್ರಮ ನಿರೂಪಿಸಿದರು ಮಾಯಾ ಚಿಪ್ಳೂಣ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ನ ಸಂಚಾಲಕ ನಾಮದೇವ ರಾವ್ ವಂದಿಸಿದರು. 120 ಮಂದಿ ಶಿಬಿರದ ಪ್ರಯೋಜನ ಪಡೆದರು.






