ಬೆಳ್ತಂಗಡಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಂದು ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಸುಮಾರು ನಾಲ್ಕು ಕಿಲೋಮೀಟರ್ ಜಾಥಾವನ್ನು ನಡೆಸಿದರು. ಶಾಲೆಯ ಗಣಿತ ಅಧ್ಯಾಪಿಕೆ ಶೈಲಶ್ರೀ ಅವರು ಧ್ವಜಾರೋಹಣವನ್ನು ಮಾಡಿದ ನಂತರ ಶಾಲಾ ಮೈದಾನದಲ್ಲಿ ಸೇರಿದ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಮರೆವಣಿಗೆ ಹೊರಟರು. ಮೆರೆವಣಿಗೆಯು ಸೋಮಂತಡ್ಕ ಪೇಟೆಗೆ ಹೋಗಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ವೃತ್ತದಿಂದ ಹಿಂದಿರುಗಿ ಕಾನರ್ಪದ ದೇವಿಗುಡಿಯ ವೃತ್ತದಿಂದ ಹಿಂದಿರುಗಿತು. ಮೆರೆವಣಿಗೆಯ ಉದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರರಿಗೆ, ಸ್ವಾತಂತ್ರ್ಯ ಹೋರಾಟದ ಉದಾತ್ತ ಧ್ಯೇಯಗಳಿಗೆ ಜೈಕಾರವನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಸೋಮಂತಡ್ಕದ ನಾಗರಿಕರು ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಮತ್ತು ಶರಬತ್ತನ್ನು ವಿತರಿಸಿದರು. ಮೆರೆವಣಿಗೆಯು ಶಾಲೆಯ ಪ್ರಾಂಶುಪಾಲರಾದ ಮುರಳೀಧರ್ ಜಿ.ಎನ್. ಅವರ ಮಾರ್ಗದರ್ಶನದಂತೆ ನಡೆಯಿತು.






