ಬೆಳ್ತಂಗಡಿ; ವಕೀಲರೊಬ್ಬರು ತಿಂಗಳುಗಳ ಹಿಂದೆ ಕಳೆದುಕೊಂಡಿದ್ದ ಚಿನ್ನದ ಸರ ಬಿದ್ದು ಸಿಕ್ಕಿರುವುದನ್ನು ಅದರ ವಾರೀಸುದಾರರಿಗೆ ಮರಳಿಸುವ ಮೂಲಕ ಬೆಳ್ತಂಗಡಿಯ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಬಶೀರ್ ವಗ್ಗ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.ನ್ಯಾಯವಾದಿ ಶೈಲೇಶ್ ಠೋಸರ್ ಅವರು ತಿಂಗಳ ಹಿಂದೆ 1.5 ಲಕ್ಷ ರೂಪಾಯಿ ಮೌಲ್ಯದ ತನ್ನ ಚಿನ್ನದ ಸರ ಕಳೆದುಕೊಂಡಿದ್ದರು. ಹಲವೆಡೆ ಹುಡುಕಾಟ ನಡೆಸಿದ್ದರೂ ಸರ ಸಿಕ್ಕಿರಲಿಲ್ಲ. ಇದು ಇನ್ನು ಸಿಗುವುದು ಅನುಮಾನ ಎಂದುಕೊಂಡಿದ್ದರು. ಆದರೆ ಈ ಸರ ಮುಹಮ್ಮದ್ ಬಶೀರ್ ಅವರಿಗೆ ಸಿಕ್ಕಿತ್ತು. ಈ ಸರ ಯಾರದ್ದೆಂದು ತಿಳಿಯದೇ ಇದ್ದುದರಿಂದ ಸಾರ್ವಜನಿಕ ಪ್ರಕಟಣೆ ಅಥವಾ ಸೋಷಿಯಲ್ ಮೀಡಿಯಾಗಳಲ್ಲಿ ಸರ ಕಳೆದುಕೊಂಡವರು ಮೆಸೇಜ್ ಹಾಕುತ್ತಾರೆಯೇ ಎಂದು ಒಂದು ತಿಂಗಳು ಕಾದು ಕುಳಿತಿದ್ದರು. ಆದರೆ ಯಾವುದೇ ಮಾಹಿತಿ ಲಭಿಸದ್ದರಿಂದ ಬಶೀರ್ ಅವರೇ ಸ್ವಂತ ಖರ್ಚಿನಲ್ಲಿ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಸರ ಬಿದ್ದು ಸಿಕ್ಕಿದೆ ಎಂದು ಸಾರ್ವಜನಿಕ ಪ್ರಕಟಣೆ ನೀಡಿದ್ದರು. ಇದನ್ನು ಅರಿತ ಶೈಲೇಶ್ ಠೋಸರ್ ಅವರ ಕಚೇರಿ ಪಕ್ಕದ ಅಶೋಕ ಮಡಿವಾಳ ಅವರು, ಶೈಲೇಶ್ ಅವರಿಗೆ ಮಾಹಿತಿ ನೀಡಿದಂತೆ ಸದ್ರಿ ನಂಬರನ್ನು ಸಂಪರ್ಕಿಸಿ, ಪರಿಶೀಲಿಸಿದಾಗ ಅದು ಸರ ತನ್ನದೇ ಎಂದು ಶೈಲೇಶ್ ಠೋಸರ್ಗೆ ರುಜುವಾತಾಯುತು. ಈ ಹಿನ್ನೆಲೆಯಲ್ಲಿ ಮುಹಮ್ಮದ್ ಬಶೀರ್ ಅವರು ಶೈಲೇಶ್ ಅವರಿಗೆ ಸರವನ್ನು ಹಸ್ತಾಂತರಿಸಿದರು.ಬಶೀರ್ ಉಜಿರೆಯಲ್ಲಿ ಇ.ಕೆ. ಬೀಡೀಸ್ ಉದ್ಯಮ ನಡೆಸುತ್ತಿದ್ದು, ಜಮೀಯತುಲ್ ಫಲಾಹ್ ಮಾಜಿ ಅಧ್ಯಕ್ಷರಾಗಿ, ಬೆಳ್ತಂಗಡಿ ದಾರುಸ್ಸಲಾಂ ದಅವಾ ಸೆಂಟರ್ನ ಸ್ಥಾಪಕ ಕಾರ್ಯದರ್ಶಿಯಾಗಿ ಗುರುತಿಸಿಕೊಂಡವರಾಗಿದ್ದಾರೆ.






