ಮೂಡುಬಿದಿರೆ: ಮೂಡುಬಿದಿರೆ ಪುರಸಭೆಯ ಸ್ವಚ್ಛತಾ ಕಾರ್ಮಿಕರು ಮತ್ತು ಚಾಲಕರು ಹಾಗೂ ಇದಕ್ಕೆ ಪೂರಕವಾಗಿ ಇರುವ ಇತರ ಕಾರ್ಮಿಕರ ಅಧ್ಯಯನಾ ಪ್ರವಾಸವನ್ನು ಕಾರ್ಮಿಕರ ದಿನಾಚರಣೆಯಾದ ಸೆಪ್ಟೆಂಬರ್ 23ರಂದು ಹಮ್ಮಿಕೊಳ್ಳಲಾಗಿತ್ತು.ಊರಿನ ಸ್ವಚ್ಛತೆಯ ಬಗ್ಗೆ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿರುವ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಪಂಚಾಯತ್ನ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ತ್ಯಾಜ್ಯ ನಿರ್ವಹಣೆಯನ್ನು ವೀಕ್ಷಿಸಿದ ಪುರಸಭೆಯ ಪೌರ ಕಾರ್ಮಿಕರು ವಿಶೇಷ ಆಸಕ್ತಿ ವಹಿಸಿದರು. ಈ ಅಧ್ಯಯನ ತಂಡದ ಮಾರ್ಗದರ್ಶಕರಾಗಿ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಮುಖ್ಯಾಧಿಕಾರಿ ಇಂದು ಎಂ. ಮತ್ತು ಪುರಸಭೆ ಪರಿಸರ ಅಭಿಯಂತರರಾದ ಶಿಲ್ಪಾ ಭಾಗವಹಿಸಿದ್ದರು. ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಅಲ್ಲಿನ 14 ಮಂದಿ ಸ್ವಚ್ಛತಾ ಕಾರ್ಮಿಕರ ಮೇಲ್ವಿಚಾರಕಿ ಅನೂಷಾ ಸ್ವಚ್ಛತೆ ಮತ್ತು ಘನ-ದ್ರವ ನಿರ್ಮೂಲನೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.






