ಬೆಳ್ತಂಗಡಿ: ರಕ್ತದಾನ ಜೀವ ಉಳಿಸುವ ಬದುಕಿನ ಪುಣ್ಯದ ಕಾರ್ಯ. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಶ್ರೇಷ್ಠ ಕಾರ್ಯವನ್ನು ಮಾಡಬೇಕು ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.ಅವರು ಜನವರಿ 15ರಂದು ತನ್ನ 78ನೇ ಹುಟ್ಟುಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ (ರಿ) ಮಂಗಳೂರು, ರೆಡ್ ಸೊಸೈಟಿ ಬೆಳ್ತಂಗಡಿ ಹಾಗೂ ಶ್ರೀ ಗುರುದೇವ ಎಜುಕೇಶನ್ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ಸಹಯೋಗದಲ್ಲಿ ನಡೆಸಿದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಈ ಪ್ರಕೃತಿಯಲ್ಲಿ ಕೃತಕವಾಗಿ ತಯಾರು ಮಾಡಲು ಅಸಾಧ್ಯವಾದುದು ರಕ್ತ. ವ್ಯಕ್ತಿಯೊಬ್ಬರಿಗೆ ರಕ್ತದಾನ ಮಾಡುವುದು ನಮ್ಮ ಜೀವದಾನ ಮಾಡುವುದಕ್ಕೆ ಸಮಾನ. ನಮ್ಮಿಂದ ಆಸ್ತಿ ಸಂಪತ್ತು ದಾನ ಮಾಡಲು ಅಸಾಧ್ಯವಾದರೂ ರಕ್ತದಾನ ಮಾಡುವ ಸಂಕಲ್ಪವನ್ನು ಪ್ರತಿಯೊಬ್ಬರೂ ತನ್ನ ಬದುಕಿನ ಉದ್ದಕ್ಕೂ ಇಟ್ಟುಕೊಳ್ಳಬೇಕು ಎಂದರು.ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಸ್ವತಃ ರಕ್ತದಾನ ಮಾಡಿ ಮಾತನಾಡಿ, ವಸಂತ ಬಂಗೇರರು ಸಮಸ್ತ ಸಮಾಜದ ಆಸ್ತಿಯಾಗಿದ್ದಾರೆ. ಅವರು ಎಲ್ಲರಿಗೂ ಪ್ರೇರಣಾದಾಯಕ ವ್ಯಕ್ತಿತ್ವ ಬೆಳೆಸಿಕೊಂಡವರು. ಅವರ ಅಭಿಮಾನಿಗಳು ರಕ್ತದಾನ ಶಿಬಿರದ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಮಾದರಿ ಕಾರ್ಯ ಎಂದರು.ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಸಿದ್ಧಾಂತಗಳನ್ನು ಬದುಕಿನಲ್ಲಿ ಪಾಲಿಸುತ್ತಾ ಬಂದವರು ವಸಂತ ಬಂಗೇರರು. ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿದವರು. ಅವರು ಆರಂಭಿಸಿದ ಈ ಗುರುದೇವ ಶಿಕ್ಷಣ ಸಂಸ್ಥೆ ಕರಾವಳಿ ಭಾಗದ ಶ್ರೇಷ್ಠ ಶಿಕ್ಷಣಸಂಸ್ಥೆಯಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ ಎಂದು ರಕ್ಷಿತ್ ವಿಶ್ವಾಸ ವ್ಯಕ್ತಪಡಿಸಿದರು.ರೆಡ್ ಕ್ರಾಸ್ ಸಂಸ್ಥೆಯ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್.ಎಂ. ಮಾತನಾಡಿ, ವಸಂತ ಬಂಗೇರ ತಾಲ್ಲೂಕಿನ ಅಪರೂಪದ ರಾಜಕಾರಣಿ. ಸೋತರೂ ಗೆದ್ದರೂ ಜನರ ಮಧ್ಯೆ ಇದ್ದು ಜನರ ಸಮಸ್ಯೆಗೆ ಸ್ಪಂದಿಸುವವರು. ಅವರ ಹುಟ್ಟುಹಬ್ಬದ ದಿನ ಅವರ ಅಭಿಮಾನಿಗಳು ಹಮ್ಮಿಕೊಂಡಿರುವ ರಕ್ತದಾನ ಕಾರ್ಯ ಸಾರ್ಥಕ ಕಾರ್ಯ ಎಂದರು.ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಶಾಹುಲ್ ಹಮೀದ್, ವಕೀಲ ಮನೋಹರ್ ಕುಮಾರ್, ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಶುಭ ಹಾರೈಸಿದರು.ವೇದಿಕೆಯಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಯಶವಂತ ಪಟವರ್ಧನ್, ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಉಪಸ್ಥಿತರಿದ್ದರು.ಶ್ರೀ ಗುರುದೇವ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕೆ. ವಸಂತ ಬಂಗೇರರನ್ನು ಗೌರವಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ (ರಿ) ಮಂಗಳೂರು ಇದರ ಅಧ್ಯಕ್ಷಶಿವಕುಮಾರ್ ಎಸ್.ಎಂ. ಸ್ವಾಗತಿಸಿದರು. ಶೇಖರ್ ಲಾಯಿಲ ಪ್ರಸ್ತಾವಿಸಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟೆ ಬೆಳ್ತಂಗಡಿ ಘಟಕದ ಸದಸ್ಯೆ ಆಶಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಸಮೀವುಲ್ಲಾ ವಂದಿಸಿದರು.






