ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ

ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ನಮ್ಮ ಮಾತೃಭೂಮಿ ಸ್ವರ್ಗಕ್ಕಿಂತ ಮಿಗಿಲಾದುದು. ತಾಯಿ ಭಾಷೆ ಹೃದಯದ ಭಾಷೆ. ರಾಜ್ಯದಲ್ಲಿ ಮಾತೃಭಾಷೆಗೆ ಪ್ರಾಧಾನ್ಯತೆ ಇದ್ದರೂ ರಾಜಧಾನಿಯಲ್ಲೇ ಕನ್ನಡದ ಉಳಿವಿಗೆ ಸವಾಲು ಎದುರಾಗಿದೆ. ಕಾರಣ ಅನ್ಯಭಾಷಿಗರ ಆಕ್ರಮಣ! ಕನ್ನಡ. ಭಾಷೆಯನ್ನು ಮುಂದಿನ ಅನೇಕ ವರ್ಷಗಳವರೆಗೆ ಜೀವಂತವಾಗಿರಿಸಲು ಕನ್ನಡ ನಾಡು, ನುಡಿ, ಸಂಸ್ಕೃತಿ ಭಾಷೆಯ ಸಂವರ್ಧನೆಗೆ ಭಾಷೆಯ ಆಸ್ಮಿತೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಬಲಗೊಳಿಸೋಣ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಹೇಳಿದರು.ಅವರು ಮೇ 5ರಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಉಜಿರೆ ಶ್ರೀ ಸಿದ್ಧವನ ಗುರುಕುಲದಲ್ಲಿ ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಮೊಬೈಲ್ ಹಾಗೂ ಫಾಸ್ಟ್‌ಫುಡ್ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಓದುವ, ಬರೆಯುವ ಹವ್ಯಾಸ ಮರೆಯಾಗುತ್ತಿದೆ. ಅದಕ್ಕಾಗಿ ಪ್ರತಿ ಹೋಬಳಿ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಕನ್ನಡ ಭಾಷೆಯಲ್ಲಿ ಸಂವಾದ, ಕವಿ- ಕವನಗಳನ್ನು ಬೆಂಬಲಿಸುವ, ಕನ್ನಡ ಭಾಷೆಯಲ್ಲಿ ಬರೆಯುವ ಕಾರ್‍ಯಕ್ರಮ ಹಮ್ಮಿಕೊಳ್ಳ ಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಶ್ರೇಷ್ಠವಾದದ್ದು ತನ್ನತ್ತ ಆವರಿಸುವ ಸಲುವಾಗಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ; ಕನ್ನಡ ಭಾಷೆಯ ಸಮೃದ್ಧಿಗೆ ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 400ಕ್ಕಿಂತ ಅಧಿ ಕ ಕಾರ್‍ಯಕ್ರಮಗಳನ್ನು ನಡೆಸಿ ಸಾಹಿತ್ಯವನ್ನು ಮನೆಮನೆಗೆ ತಲುಪಿಸುವ ಕಾರ್ಯ ಕೈಗೊಳ್ಳಲಾಗಿದೆ. ಜಿಲ್ಲೆಯ 9 ತಾಲೂಕುಗಳಲ್ಲಿ ಇಂದು ಸಂಸ್ಥಾಪಕ ದಿನಾಚರಣೆ ಆಯೋಜಿಸಲಾಗಿದೆ. ತಾಲೂಕು, ಹೋಬಳಿ ಮಟ್ಟದಲ್ಲಿ ಘಟಕ ಸ್ಥಾಪಿಸಿ ಗ್ರಾಮ ಸಂಚಾಲಕರ ಮೂಲಕ ಕನ್ನಡ ಭಾಷೆಯ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು. ಸಂಪನ್ಮೂಲ ವ್ಯಕ್ತಿ ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಶ ಕುಮಾರ ಎಂ.ಕೆ. ಉಪನ್ಯಾಸ ನೀಡಿ; ಒಂದು ಭಾಷೆ, ಸಾಹಿತ್ಯ ಮೇಲ್ನೋಟಕ್ಕೆ ಅದಾಗಿ ತೆರೆದುಕೊಳ್ಳುವುದಿಲ್ಲ. ಸಾಹಿತ್ಯ ಶಬ್ಧ ಮತ್ತು ಅರ್ಥಗಳ ಮಂಜುಳ ಸಂಯೋಜನೆ. ಸಮಾಜಕ್ಕೆ ಹಿತವಾದ ಸಾಹಿತ್ಯ ನೀಡುವ ಸಾಹಿತ್ಯ ಕೃಷಿ ಬೆಳೆಯಬೇಕಿದೆ. ಆದರೆ ಇಂದು ವಿಕೃತಿಯೆಡೆಗೆ ಕೊಂಡೊಯ್ಯುವ ಸಾಹಿತ್ಯದಿಂದ ಅಪಾಯವಿದೆ. ನಮ್ಮನ್ನು ಜೀವನ ಪರ್ಯಂತ ಉಳಿಸಿಕೊಳ್ಳಬಹುದಾದ ಹವ್ಯಾಸ ಇದ್ದರೆ ಅದು ಓದುವ ಹವ್ಯಾಸ ಎಂದ ಅವರು ಎಲ್ಲ ಭಾಷೆಗಳನ್ನು ಗೌರವಿಸಿ, ಕನ್ನಡ ಭಾಷೆಯನ್ನು ಪ್ರೀತಿಸಿ. ನಮ್ಮ ಕನ್ನಡ ಭಾಷಾ ಸಂಸ್ಕೃತಿಯಿಂದ ಸಾಹಿತ್ಯವನ್ನು ಗಟ್ಟಿಗೊಳಿಸುವ ಕೆಲಸವಾಗಲಿ. ಸಾಹಿತ್ಯ ಯಾವತ್ತೂ ವಿಕೃತಿಯ ಕಡೆಗೆ ಕೊಂಡುಹೋಗಬಾರದು. ಪ್ರಕೃತಿ ಸಂಸ್ಕೃತಿಯಾಗಿ ಪರಿವರ್ತನೆಯಾಗುವ ಸಾಹಿತ್ಯ ಸೃಷ್ಟಿಯಾಗಬೇಕು. ಸಂಸ್ಕೃತಿಯಿಂದ ಸಾಹಿತ್ಯವನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಸಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಾಧವ ಎಂ.ಕೆ. ಮಾತನಾಡಿ; ಭಾರತ ದೇಶ ಇತರ ದೇಶದ ಮೇಲೆ ದಾಳಿ ಮಾಡಿರುವ ಇತಿಹಾಸವಿಲ್ಲ. ಆದರೆ ಭಾರತದ ಮೇಲೆ ಆಗಿರುವ ದಾಳಿಗಳು ಭಾಷೆಯ ಮೇಲೂ ಪರಿಣಾಮ ಬೀರಿದೆ. ಅದಕ್ಕೆ ಬ್ರಿಟೀಷರಿಂದ ಭಾರತದಲ್ಲಿ ಆಂಗ್ಲ ಶಿಕ್ಷಣ ಪದ್ಧತಿ ಪರಿಣಾಮ ಬೀರಿರುವುದೇ ಸಾಕ್ಷಿ. ಇಂದು ಶಿಕ್ಷಣ ಪದ್ಧತಿ ವ್ಯಾಪರೀಕರಣವಾಗಿದೆ. ನಮ್ಮ ಡೀಮ್ಡ್ ವಿಶ್ವವಿದ್ಯಾಲಯಗಳು ನಮ್ಮ ದೇಶೀಯ ಭಾಷೆಯನ್ನು ಅಳಿಸಿ ಪಾಶ್ಚಾತ್ತೀಕರಣವಾಗಿಸುತ್ತ ವಾಲುತ್ತಿದೆ. ಹೀಗಾಗಿ ಕನ್ನಡ ಭಾಷೆಯ ಕೀಳರಿಮೆಯಿಂದ ಹೊರಬರದೇ ಹೋದಲ್ಲಿ ಕನ್ನಡದ ಉಳಿವು ಸವಾಲಾಗಲಿದೆ. ಈ ನಿಟ್ಟಿನಲ್ಲಿ ಗಮನ ಸೆಳೆಯುವ ಅಥವಾ ಹೋರಾಟ ನಡೆಸುವ ಪ್ರಯತ್ನವಾಗಬೇಕಾಗಿದೆ. ಭಾರತೀಯ ಭಾಷೆಗಳ ಮೇಲೆ ನಡೆಯುತ್ತಿರುವ ಪ್ರಹಾರವನ್ನು ತಡೆಗಟ್ಟಬೇಕಾಗಿದೆ ಎಂದು ವಿಶ್ಲೇಷಿಸಿದರು.ನಿವೃತ್ತ ಪ್ರಾಚಾರ್ಯ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ಏಕಪಾತ್ರಾಭಿನಯದಂತೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

Latest 5

Related Posts