ಬೆಳ್ತಂಗಡಿ: ಕಠಿಣ ಪರಿಶ್ರಮ ಹಾಗೂ ಪ್ರಯತ್ನದಿಂದ ವಿಶೇಷ ಸಾಧನೆಗಳನ್ನು ಮಾಡಿ ತಾಂತ್ರಿಕ ಆವಿಷ್ಕಾರಗಳನ್ನು ಪ್ರದರ್ಶನಕ್ಕೆ ಅಣಿಗೊಳಿಸಿದ್ದೀರಿ. ಸೃಜನಶೀಲ ಸಂಶೋಧನೆಗಳಿಂದ ಸಮಾಜ ಹಾಗೂ ಮುಂದಿನ ಪೀಳಿಗೆಗೆ ವಿಶೇಷ ಕೊಡುಗೆ ನೀಡಿದ್ದೀರಿ. ಅಧ್ಯಯನಕ್ಕೆ ವಿಪುಲ ಅವಕಾಶಗಳಿದ್ದು ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ಮುಖ್ಯ. ಸಮೂಹದ ಸಾಧನೆಯಲ್ಲಿ ಗುರಿ ತಲುಪಿ ಗ್ರಾಹಕರಿಗೆ ಉಪಯುಕ್ತ ವಸ್ತುಗಳನ್ನು ಒದಗಿಸಿದಲ್ಲಿ ನಿಮ್ಮ ಸಾಧನೆ ಹಾಗು ಪರಿಶ್ರಮ ಸಾರ್ಥಕ್ಯ ಪಡೆಯುತ್ತದೆ ಎಂದು ಸಿಂಗಾಪುರದಲ್ಲಿ 16 ವರ್ಷಗಳ ಕಾಲ ತಾಂತ್ರಿಕ ವಿಭಾಗದಲ್ಲಿ ವಿಶೇಷ ಪರಿಣತಿ ಪಡೆದ ತೀರ್ಪುಗಾರ ಆದರ್ಶ ಕಾರಂತ್ ಅಭಿಪ್ರಾಯಿಸಿದರು. ಅವರು ಮೇ 22 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರಾಜೆಕ್ಟ್ ಎಕ್ಸಿಬಿಷನ್ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾಲೇಜು ಪ್ರಾಚಾರ್ಯ ಡಾ. ಅಶೋಕ ಕುಮಾರ್ ಟಿ, ಪ್ರಾಜೆಕ್ಟ್ ಎಕ್ಸಿಬಿಷನ್ ಸಂಯೋಜಕ ಡಾ. ಸತ್ಯನಾರಾಯಣ ಪಿ. ಮತ್ತು ವಿಭಾಗ ಮುಖ್ಯಸ್ಥರಾದ ಡಾ. ತ್ಯಾಗರಾಜು ಜಿ.ಎಸ್., ಡಾ. ರವೀಶ ಪಿ., ಡಾ. ಮಧುಸೂದನ ಕೆ., ಡಾ. ಕೆ. ಮಂಜುನಾಥ್, ಡಾ. ಜಿ.ಪಿ. ಹೆಗ್ಡೆ, ಡಾ. ಗಿರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಧೃತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ; ಕೊನೆಯಲ್ಲಿ ವಂದಿಸಿದರು. ಪ್ರಾಜೆಕ್ಟ್ ಎಕ್ಸಿಬಿಷನ್ ನಲ್ಲಿ ವಿದ್ಯಾರ್ಥಿ ಸಮೂಹ ಸಂಶೋಧಿಸಿ ಸಿದ್ಧಪಡಿಸಿದ 70 ಪ್ರಾಜೆಕ್ಟ್ ಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದ್ದು; ವಿದ್ಯಾರ್ಥಿಗಳು ಅದರ ಕಾರ್ಯಚಟುವಟಿಕೆ, ವಿಶೇಷತೆ ಹಾಗು ಪ್ರಯೋಜನದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು. ವಿವಿಧ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಪ್ರಾಜೆಕ್ಟ್ ಎಕ್ಸಿಬಿಷನ್ನಲ್ಲಿ ಭಾಗವಹಿಸಿ ಅದರ ಅನುಭವ ಪಡೆದರು. ಹೈಬ್ರಿಡ್ ಸೋಲಾರ್ ಡ್ರೈಯರ್ ಬಳಸಿ ಸೋಲಾರ್ ವಿದ್ಯುತ್ ಮೂಲಕ ಬೇಳೆಕಾಳುಗಳನ್ನು ಒಣಗಿಸುವುದು, ವೆಂಟಿಲೇಟರ್ ಮೂಲಕ ಬ್ಲಡ್ ಆಕ್ಸಿಜನ್ ಸೆನ್ಸಾರ್, ಅಗ್ರಿಕಲ್ಚರ್ ರೋಬೋಟ್, ಆಟೋಮ್ಯಾಟಿಕ್ ವೈಂಡಿಂಗ್ ಮೆಶಿನ್, ಜಿಟ್ಟರ್ ರಿಡಕ್ಷನ್ ಮೊದಲಾದ 70 ತಾಂತ್ರಿಕ ಪ್ರೊಜೆಕ್ಟ್ ಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.






