ಬೆಳ್ತಂಗಡಿ: ಸಮಾಜದ ಪ್ರತಿಯೊಬ್ಬ ಸಾಧಕನ ಹಿಂದೆ ಗುರುವೆಂಬ ಶಕ್ತಿಯ ಆದರ್ಶ, ಮಾರ್ಗದರ್ಶನ, ಮತ್ತು ಪ್ರೀತಿಯ ಹಾರೈಕೆ ಇದೆ. ಈ ದೇಶದಲ್ಲಿ ಬೆಳೆದು ಬಂದಂತಹ ಗುರು ಶಿಷ್ಯರ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.ಅವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾಭವನ ಕಾಶಿಬೆಟ್ಟುವಿನ ರೊ. ಕೆ. ರಮಾನಂದ ಸಾಲಿಯಾನ್ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನ ಸಂಭ್ರಮಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದರು. ಒಬ್ಬ ಗುರು ಸ್ವಪ್ರಯತ್ನ ಮತ್ತು ಪ್ರತಿಭೆಯಿಂದ ದೇಶದ ಯಾವುದೇ ಹುದ್ದೆಗೆ ಹೋಗಲು ಸಾಧ್ಯ ಎಂಬುದಕ್ಕೆ ಡಾ. ರಾಧಾಕೃಷ್ಣನ್ರೇ ನಿದರ್ಶನ. ಆದರೆ ಒಬ್ಬ ಗುರು ತನ್ನ ಶಿಷ್ಯ ಬಳಗ ಉನ್ನತ ಸ್ಥಾನಕ್ಕೆರಿದಾಗ ಮಾತ್ರ ನಿಜವಾದ ಸಂತಸ ಮತ್ತು ಸಂತೃಪ್ತನಾಗುತ್ತಾನೆ. ಕೃಷ್ಣ-ಅರ್ಜುನ, ದ್ರೋಣ-ಏಕಲವ್ಯ ಹಾಗೂ ಪರಮಹಂಸ-ವಿವೇಕಾನಂದರಂತಹ ಗುರುಶಿಷ್ಯರ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮಾ ಮಾತನಾಡಿ; ಭಾರತೀಯ ಗುರುಪರಂಪರೆಯ ದೃಷ್ಟಿಕೋನ ಮತ್ತು ಪಾಶ್ಚಾತ್ಯ ಗುರು ಪರಂಪರೆಯ ದೃಷ್ಟಿಕೋನಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಭಾರತೀಯ ಗುರುಗಳು ಜೀವನ ಶಿಕ್ಷಕರು. ಡಾ. ರಾಧಾಕೃಷ್ಣರನ್ನು ಶಿಕ್ಷಕರ ಹೆಸರಿನಲ್ಲಿ ಸ್ಮರಿಸುತ್ತಿರುವುದು ದೇಶದ ಶಿಕ್ಷಕ ವರ್ಗಕ್ಕೆ ಸಂದಿರುವ ಗೌರವ ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕರು ಗಳಾದ ರೊ. ಪ್ರಕಾಶ್ ಪ್ರಭು, ರೊ. ರಾಘವೇಂದ್ರ ಪಿದಮಲೆ, ಆಶಾ ಪಿದಮಲೆ, ರೊ. ಆದರ್ಶ ಕಾರಂತ್ , ಅಕ್ಷತಾ ಸಿ.ಎಚ್., ಉಮಾ ರಂಜನ್ ರಾವ್ರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಆನ್ಸ್ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್, ಕಾರ್ಯದರ್ಶಿ ಡಾ| ವಿನಯ ಕಿಶೋರ್ ಉಪಸ್ಥಿತರಿದ್ದರು.ರೋಟರಿ ಕ್ಲಬ್ ನಿಕಟ ಪೂರ್ವ ಕಾರ್ಯದರ್ಶಿ ವಿದ್ಯಾ ಕುಮಾರ್, ಶ್ರೀಧರ್ ಕೆ.ವಿ., ರೊ. ನಿವೃತ್ತ ಮೇ.ಜ. ಎಮ್. ವೆಂಕಟೇಶ್ವರ ಭಟ್ ಹಾಗೂ ಇತರ ಸದಸ್ಯರು ಭಾಗಿಯಾಗಿದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ವಂದಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರಸ್ತುತ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸತೀಶ್ಚಂದ್ರ ಎಸ್.ರನ್ನು ಗೌರವಿಸಿ ಸಮ್ಮಾನಿಸಲಾಯಿತು.







