ಬೆಳ್ತಂಗಡಿ: ಗಾಂಧೀಜಿ ಭಾರತಕ್ಕೆ ಮಾತ್ರವಲ್ಲ; ಇಡೀ ವಿಶ್ವಕ್ಕೆ ನಾಯಕರು. ಗಾಂಧೀಜಿಯವರ ಸಮಯಪ್ರಜ್ಞೆ, ಸರಳ ಜೀವನ, ಸೇವಾ ಮನೋಭಾವ, ಸ್ವಚ್ಛತೆ, ನುಡಿದಂತೆ ನಡೆದ ಅವರ ಬದುಕು ನಮಗೆಲ್ಲಾ ಪ್ರೇರಣೆಯಾಗಬೇಕು ಎಂದು ನಿವೃತ್ತ ಉಪನ್ಯಾಸಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗಮಕ ಕಲಾ ಪರಿಷತ್ತು ಅಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯ ಹೇಳಿದರು.ಅವರು ಅಕ್ಟೋಬರ್ 2ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯ ಸಭಾಂಗಣದಲ್ಲಿ ನಡೆದ ಮಹಾತ್ಮಾ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಮಹಾತ್ಮಾ ಗಾಂಧೀಜಿಯವರು ನಮ್ಮನ್ನು ಅಗಲಿ ಎಷ್ಟೋ ವರ್ಷಗಳಾದರೂ, ಅವರು ಬಿಟ್ಟುಹೋದ ಆದರ್ಶಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ. ನಮ್ಮ ಮೇಲೆ ಗಾಢವಾಗಿ ಪರಿಣಾಮ ಬೀರಿದ ಗಾಂಧಿಜೀಯವರ ಸತ್ಯ, ಅಹಿಂಸೆ, ಶಾಂತಿ ಹಾಗೂ ಸರಳ ಜೀವನದ ಸಂದೇಶಗಳನ್ನು ಎಲ್ಲರೂ ಪಾಲಿಸಿಬಿಟ್ಟರೆ ಜಗತ್ತಿನ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ. ಇಂದು ನಮಗೆ ಜಗತ್ತಿನಲ್ಲಿ ಶಾಂತಿ ಬೇಕಾಗಿದೆ. ಹಿಂಸೆಯಿಂದ ಸಾಧಿಸುವಂಥದ್ದು ಏನೂ ಇಲ್ಲ. ಎಲ್ಲ ಸಮಸ್ಯೆಗಳನ್ನು ಶಾಂತಿಯಿಂದಲೇ ಬಗೆಹರಿಸಿಕೊಳ್ಳಬೇಕು. ನಮ್ಮ ಹೋರಾಟ, ಚಳವಳಿಗಳೂ ಅಹಿಂಸಾಮಾರ್ಗದಲ್ಲಿಯೇ ಸಾಗಲಿ ಎಂಬ ಮೇಲ್ಪಂಕ್ತಿ ಹಾಕಿದವರು ಬಾಪೂಜಿ ಎಂದು ಅವರು ವಿವರಿಸಿದರು.ಈ ಸಂದರ್ಭದಲ್ಲಿ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಕೆ. ಕಾಶಿಪಟ್ಣ ಹಾಗೂ ಕೆ.ಎಮ್. ನಾಗೇಶ್ ಕುಮಾರ್ ಗೌಡ, ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್ ಲಾಯ್ಲ, ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷ ಶೇಖರ್ ಕುಕ್ಕೆಡಿ, ಸೇವಾದಳದ ಅಧ್ಯಕ್ಷ ಪ್ರದೀಪ್ ಕೆ.ಸಿ., ಗ್ರಾಮೀಣ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ನೇಮಿರಾಜ್ ಕಿಲ್ಲೂರು, ಜಿಲ್ಲಾ ಅರೋಗ್ಯ್ರ ರಕ್ಷಾ ಸಮಿತಿಯ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದಾನ ಭಂಡಾರಿ ಹಾಗೂ ಸರಕಾರದ ನಾಮನಿರ್ದೇಶಿತ ವಿವಿಧ ಸಮಿತಿಗಳ ಸದಸ್ಯರು, ಪಕ್ಷದ ವಿವಿಧ ಸಮಿತಿಯ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.






