ಬೆಳ್ತಂಗಡಿ: ಜನರ ಸ್ವಭಾವ, ಸಾಮಾಜಿಕ ಅಗತ್ಯತೆ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ನೂತನ ವಿಚಾರಗಳನ್ನು ಹೊಳೆಸಿಕೊಳ್ಳುವ ಸಾಮರ್ಥ್ಯ ಔದ್ಯಮಿಕ ಪ್ರಯೋಗಶೀಲತೆಗೆ ಸಹಾಯಕವಾಗುತ್ತದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ್ ಹೆಗ್ಡೆ ಅಭಿಪ್ರಾಯಪಟ್ಟರು.ಅವರು ಅಕ್ಟೋಬರ್ 14ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿ.ವೋಕ್ ರೀಟೇಲ್ ಅಂಡ್ ಸಪ್ಲೇ ಚೈನ್ ಮ್ಯಾನೇಜಮೆಂಟ್ ವಿಭಾಗ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಘಟಕ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಆಲೋಚನೆಗಳಿಂದ ಪ್ರಭಾವ; ಭವಿಷ್ಯದ ಉದ್ಯಮಿಗಳಿಗಾಗಿ ಬೂಟ್ ಕ್ಯಾಂಪ್’ ಶೀರ್ಷಿಕೆಯ ಮೂರು ದಿನಗಳ ಬೂಟ್ ಕ್ಯಾಂಪ್ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ರಾಷ್ಟ್ರ ಕಂಡ ಎಲ್ಲ ಶ್ರೇಷ್ಠ ಉದ್ಯಮಿಗಳು ಆಯಾ ಕಾಲದ ಸಾಮಾಜಿಕ ಸ್ಥಿತಿಯನ್ನು ಅತ್ಯಂತ ಕೂಲಂಕುಶವಾಗಿ ಗಮನಿಸಿದವರು. ಜನರ ಸ್ವಭಾವ ಮತ್ತು ನಿರೀಕ್ಷೆಗಳಿಗೆ ತಕ್ಕಂತೆಯೇ ಔದ್ಯಮಿಕ ಪ್ರಯೋಗಗಳನ್ನು ಕೈಗೊಂಡು ಯಶಸ್ಸು ಸಾಧಿಸಿದವರು ಎಂದ ಕುಮಾರ ಹೆಗ್ಡೆ;ನವೀನ ಮಾದರಿಯ ಉದ್ಯಮಗಳನ್ನು ಸ್ಥಾಪಿಸಲು ಇಚ್ಚಿಸುವವರು ಕುತೂಹಲದ ಗುಣವನ್ನು ಕಾಯ್ದುಕೊಳ್ಳಬೇಕು. ಸಾಮಾಜಿಕ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಅದಕ್ಕೆ ಪ್ರತಿಸ್ಪಂದಿಸುವ ನಿಟ್ಟಿನಲ್ಲಿ ಯೋಚಿಸಿದಾಗ ಔದ್ಯಮಿಕವಾದ ಹೊಸ ಐಡಿಯಾಗಳು ಹೊಳೆಯುತ್ತವೆ. ಬೂಟ್ ಕ್ಯಾಂಪ್ಗಳು ಈ ದೃಷ್ಟಿಯಿಂದ ಪ್ರೇರಣಾತ್ಮಕ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ.ವೋಕ್ ರೀಟೇಲ್ ಅಂಡ್ ಸಪ್ಲೇ ಚೈನ್ ಮ್ಯಾನೇಜಮೆಂಟ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಸ್ವತಃ ಸಿದ್ಧಪಡಿಸಿದ ಕರಕುಶಲ ವಸ್ತುಗಳು, ಆಹಾರ ಉತ್ಪನ್ನಗಳು, ಕಾರ್ಯಕ್ರಮಗಳ ನಿರ್ವಹಣೆ, ತಾಂತ್ರಿಕ ಸೇವೆಗಳು, ಹಣಕಾಸು ಸಲಹಾ ಸಂಸ್ಥೆಗಳು, ಟ್ರಾವೆಲಿಂಗ್ ಏಜೆನ್ಸಿ ಸೇರಿದಂತೆ ಹದಿನೈದು ವೈವಿಧ್ಯಮಯ ಸ್ಟಾರ್ಟಪ್ಗಳ ಲೋಕಾರ್ಪಣೆ ಮಾಡಲಾಯಿತು.ವಿಭಾಗದ ಮುಖ್ಯಸ್ಥ ಅಶ್ವಿತ್ ಹೆಚ್.ಆರ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡೆಕ್ಕನ್ ಗ್ರುಪ್ ಆಫ್ ಕಂಪೆನೀಸ್ ನಿರ್ದೇಶಕ ಮಹ್ಮದ್ ಬಾಷಿಲ್ ಖಾದರ್, ಉದ್ಯಮಗಳ ಅಭಿವೃದ್ಧಿ ಘಟಕದ ಸಂಯೋಜಕರಾದ ಸ್ವಾತಿ ಬಿ., ಸುಮನ್ ಜೈನ್ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಇಶಾ ಸ್ವಾಗತಿಸಿದರು, ಶಾಂಭವಿ ಅತಿಥಿಗಳನ್ನು ಪರಿಚಯಿಸಿದರು, ಅರ್ಚನ ವಂದಿಸಿದರು. ಅನುಷಾ ಕಾರ್ಯಕ್ರಮವನ್ನು ನಿರೂಪಿಸಿದರು.






