ಬೆಳ್ತಂಗಡಿ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ರೂಪಾಯಿ 1,439 ಕೋಟಿ ವ್ಯವಹಾರ ನಡೆಸಿ, ರೂಪಾಯಿ 2.39 ಕೋಟಿ ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ 16% ಡಿವಿಡೆಂಡ್ ನೀಡಲು ನಿರ್ಣಯಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ ನಾರಾಯಣ್ ತಿಳಿಸಿದರು.ಮುಂಡಾಜೆ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಸೆಪ್ಟೆಂಬರ್ 13ರಂದು ಜರಗಿದ ಸಂಘದ 105ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಸಂಘವು 6,071 ಮಂದಿ ಸದಸ್ಯರನ್ನು ಹೊಂದಿದ್ದು , 7.96 ಕೋಟಿ ರೂಪಾಯಿ ಪಾಲು ಬಂಡವಾಳ ಹೊಂದಿದೆ. 77. 23 ಕೋಟಿ ರೂಪಾಯಿ ಠೇವಣಿ ಇದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಸಹಕಾರದೊಂದಿಗೆ 114 ಕೋಟಿ ರೂಪಾಯಿ ಸಾಲ ನೀಡಿದ್ದು ವರ್ಷಾಂತ್ಯಕ್ಕೆ 100% ಸಾಲ ವಸೂಲಾತಿಯಾಗಿರುತ್ತದೆ ಎಂದು ಪ್ರಕಾಶ್ ನಾರಾಯಣ್ ಹೇಳಿದರು. ಮುಂದಿನ ದಿನಗಳಲ್ಲಿ ಸಂಘದ ಸ್ವಂತ ಜಾಗಗಳಲ್ಲಿ ವಾಣಿಜ್ಯ ಸಂಕೀರ್ಣ, ಪೆಟ್ರೋಲ್ ಪಂಪ್ ನಿರ್ಮಾಣ, ಸಂಘದ ವ್ಯಾಪ್ತಿಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಪೂರ್ಣಾವಧಿ ಶಾಖೆ ಆರಂಭಿಸಲು ಮನವಿ ಸಲ್ಲಿಸುವುದು, ಕೃಷಿಕ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಕ್ರಿಮಿನಾಶಕ ಗೊಬ್ಬರ, ಕೃಷಿ ಉಪಕರಣ ಪೂರೈಕೆ, ವಿಧಾನ ಪರಿಷತ್ತಿಗೆ ಸಹಕಾರಿ ಕ್ಷೇತ್ರದಿಂದ ಓರ್ವ ಎಂಎಲ್ಸಿ ಬರುವಂತೆ ಇತರ ಸಹಕಾರ ಸಂಘಗಳ ಸಹಕಾರದೊಂದಿಗೆ ಸರಕಾರಕ್ಕೆ ಒತ್ತಡ ಹೇರುವುದು ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಉಪಾಧ್ಯಕ್ಷ ರಾಘವ ಗೌಡ, ನಿರ್ದೇಶಕರಾದ ವೆಂಕಟೇಶ್ವರ ಭಟ್, ಶಶಿಧರ ಕಲ್ಮಂಜ, ರಾಘವ ಕಲ್ಮಂಜ, ರವಿ ಪೂಜಾರಿ, ಚೆನ್ನಕೇಶವ ನಾಯ್ಕ, ಅಶ್ವಿನಿ ಎ.ಹೆಬ್ಬಾರ್, ಸುಮಾ ಎಂ. ಗೋಖಲೆ, ಮೋಹಿನಿ, ನಾರಾಯಣ ಫಡ್ಕೆ, ಬಾಬು ಗೌಡ, ಅಜಯ್ ಕೆ.ಎ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಪರಾಂಜಪೆ ಉಪಸ್ಥಿತರಿದ್ದರು. ಕಕ್ಕಿಂಜೆ ಶಾಖಾ ಪ್ರಬಂಧಕಿ ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು.






